ವಾಚಕರಿಂದ ಪ್ರಶ್ನೆಗಳು
ಗಲಾತ್ಯ 4:24ರಲ್ಲಿ ಪೌಲ ಯಾವ ಎರಡು ಒಪ್ಪಂದಗಳ ಬಗ್ಗೆ ಮಾತಾಡ್ತಿದ್ದ?
ಅಬ್ರಹಾಮನಿಗೆ ಸಾರ ಮತ್ತು ಹಾಗರಳ ಜೊತೆ ಇದ್ದ ಸಂಬಂಧದ ಬಗ್ಗೆ ಮಾತಾಡಿದ ಮೇಲೆ ಅಪೊಸ್ತಲ ಪೌಲ “ಈ ವಿಷ್ಯಗಳಿಗೆ ಸಾಂಕೇತಿಕ ಅರ್ಥ ಇದೆ. ಈ ಸ್ತ್ರೀಯರು ಎರಡು ಒಪ್ಪಂದಗಳನ್ನ ಸೂಚಿಸ್ತಾರೆ” ಅಂತ ಹೇಳಿದ. (ಗಲಾ. 4:22-24) ಈ ಮುಂಚೆ ಈ ಎರಡು ಒಪ್ಪಂದಗಳು ನಿಯಮದ ಒಪ್ಪಂದ ಮತ್ತು ಹೊಸ ಒಪ್ಪಂದ ಅಂತ ಅಂದ್ಕೊಂಡಿದ್ವಿ. ಆದ್ರೆ ಈ ವಚನವನ್ನ ಇನ್ನೂ ಚೆನ್ನಾಗಿ ಅಧ್ಯಯನ ಮಾಡಿದ ಮೇಲೆ ನಾವು ಹಿಂದೆ ಅಂದ್ಕೊಂಡಿದ್ರಲ್ಲಿ ಸ್ವಲ್ಪ ಬದಲಾವಣೆ ಮಾಡ್ಕೊಬೇಕು ಅಂತ ಗೊತ್ತಾಯ್ತು. ಇಲ್ಲಿ ಪೌಲ ಹೊಸ ಒಪ್ಪಂದದ ಬಗ್ಗೆ ಅಲ್ಲ, ಅಬ್ರಹಾಮನ ಜೊತೆ ದೇವರು ಮಾಡಿದ ಒಪ್ಪಂದದ ಬಗ್ಗೆ ಮಾತಾಡ್ತಿದ್ದಾನೆ ಅಂತ ಅನಿಸ್ತಿದೆ. ಇದಕ್ಕೆ ಕೆಲವು ಕಾರಣಗಳನ್ನ ನೋಡೋಣ.a
ಪೌಲ ದಾಸಿಯಾಗಿದ್ದ ಹಾಗರಳನ್ನ ಸಿನಾಯಿ ಬೆಟ್ಟಕ್ಕೆ ಸೂಚಿಸಿ ಮಾತಾಡಿದ. (ಗಲಾ. 4:25) ಕ್ರಿಸ್ತ ಪೂರ್ವ 1513ರಲ್ಲಿ ಸಿನಾಯಿ ಬೆಟ್ಟದ ಹತ್ರ ಮಾಡಿದ ನಿಯಮದ ಒಪ್ಪಂದವನ್ನ ಹಾಗರಳು ಸೂಚಿಸ್ತಿದ್ದಳು. (ವಿಮೋ. 19:5, 6) ಯಾವ ಅಪರಿಪೂರ್ಣ ಮನುಷ್ಯನಿಗೂ ಈ ಒಪ್ಪಂದದಲ್ಲಿದ್ದ ನಿಯಮಗಳನ್ನ ಪರಿಪೂರ್ಣವಾಗಿ ಪಾಲಿಸೋಕೆ ಆಗ್ತಿರಲಿಲ್ಲ, ಆದ್ರಿಂದ ಈ ನಿಯಮಗಳು, ‘ನಾವು ಪಾಪಕ್ಕೆ ದಾಸರಾಗಿದ್ದೀವಿ’ ಅನ್ನೋದನ್ನ ಯೆಹೂದ್ಯರಿಗೆ ನೆನಪು ಮಾಡ್ತಿತ್ತು. ಅದ್ರ ಜೊತೆಗೆ, ಒಬ್ಬ ಮನುಷ್ಯನಾಗಿ ಆ ನಿಯಮಗಳನ್ನ ಪರಿಪೂರ್ಣವಾಗಿ ಪಾಲಿಸಲಿಕ್ಕಿದ್ದ ಮೆಸ್ಸೀಯನನ್ನ ಗುರುತಿಸೋಕೆ ಇಸ್ರಾಯೇಲ್ ಜನಾಂಗಕ್ಕೆ ಈ ಒಪ್ಪಂದ ಸಹಾಯ ಮಾಡ್ತಿತ್ತು. ಮೆಸ್ಸೀಯ ತನ್ನ ಪರಿಪೂರ್ಣ ಜೀವವನ್ನ ಬಲಿಯಾಗಿ ಕೊಟ್ಟಾಗ ಅಪರಿಪೂರ್ಣ ಮನುಷ್ಯರಿಗೆ ಪಾಪ ಮತ್ತು ಮರಣದಿಂದ ಬಿಡುಗಡೆ ಪಡಿಯೋಕೆ ಸಾಧ್ಯ ಆಯ್ತು. (ಗಲಾ. 3:19, 24, 25) ದೇವರ ಉದ್ದೇಶವನ್ನ ಯೇಸು ನಿಜ ಮಾಡಿದ ಮೇಲೆ ಇನ್ಮುಂದೆ ಆ ನಿಯಮದ ಒಪ್ಪಂದ ಬೇಕಿರಲಿಲ್ಲ.—ರೋಮ. 10:4.
ಪೌಲ ಹಾಗರ ಮತ್ತು ಸಾರಳಿಗೆ ಇದ್ದ ವ್ಯತ್ಯಾಸವನ್ನ ಹೇಳಿದ. ಸಾರ ‘ಸ್ವತಂತ್ರ ಸ್ತ್ರೀಯಾಗಿದ್ದಳು’ ಮತ್ತು ಅವಳಿಗೆ “ದೇವರು ಕೊಟ್ಟ ಮಾತಿಂದ” ಮಗು ಹುಟ್ಟಿತು. (ಗಲಾ. 4:23) ಆ ಮಾತೇ ಅಬ್ರಹಾಮನ ಜೊತೆ ಮಾಡ್ಕೊಂಡ ಒಪ್ಪಂದ ಆಗಿತ್ತು. (ಗಲಾ. 3:29; 4:28, 30) ಆ ಒಪ್ಪಂದ ಏನು ಅಂತ ಆದಿಕಾಂಡ 22:18ರಲ್ಲಿದೆ. ಅದು ಹೀಗೆ ಹೇಳುತ್ತೆ: “ನೀನು ನನ್ನ ಮಾತು ಕೇಳಿದ್ರಿಂದ ನಿನ್ನ [ಅಬ್ರಹಾಮನ] ಸಂತಾನದ ಮೂಲಕ ಭೂಮಿಯ ಎಲ್ಲ ದೇಶದ ಜನರಿಗೆ ಆಶೀರ್ವಾದ ಸಿಗುತ್ತೆ.”
ಅಬ್ರಹಾಮನ ಜೊತೆ ಮಾಡ್ಕೊಂಡ ಈ ಒಪ್ಪಂದದ ಮೂಲಕ ಯೆಹೋವ ದೇವರು ತಾನು ಏದೆನ್ ತೋಟದಲ್ಲಿ ಕೊಟ್ಟ ಮಾತಿನ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟನು. (ಆದಿ. 3:15) ಆ “ಸಂತಾನ” ಅಬ್ರಹಾಮನ ವಂಶದಲ್ಲೇ ಬರುತ್ತೆ ಅಂತ ಅಬ್ರಹಾಮನ ಜೊತೆ ಮಾಡ್ಕೊಂಡ ಒಪ್ಪಂದದಲ್ಲಿ ತಿಳಿಸಿದನು. ಈ “ಸಂತಾನ” ಮುಖ್ಯವಾಗಿ ಯೇಸು ಕ್ರಿಸ್ತನನ್ನ ಸೂಚಿಸುತ್ತೆ. ಆದ್ರೆ ಈ ಸಾಂಕೇತಿಕ ಸಂತಾನದಲ್ಲಿ ‘ಕ್ರಿಸ್ತನಿಗೆ ಸೇರಿರೋರು’ ಅಂದ್ರೆ ಯೇಸು ಜೊತೆ ಆಳ್ವಿಕೆ ಮಾಡೋ 1,44,000 ವಾರಸುದಾರರೂ ಸೇರಿದ್ದಾರೆ ಅಂತ ಪೌಲ ವಿವರಿಸಿದ. (ಗಲಾ. 3:16, 29; ಪ್ರಕ. 14:1-3) ಯೆಹೋವ ದೇವರು ಅಬ್ರಹಾಮನಿಗೆ ಕೊಟ್ಟ ಮಾತು ನಿಜ ಆಗೋವಾಗ ಯಾರೆಲ್ಲಾ ಯೇಸುವನ್ನ ಒಪ್ಕೊಂಡು ಆತನ ಮಾತಿನ ಪ್ರಕಾರ ನಡೀತಾರೋ ಅವ್ರಿಗೆ ತುಂಬ ಆಶೀರ್ವಾದಗಳು ಸಿಗುತ್ತೆ.
ಪೌಲ ಈ “ಸಾಂಕೇತಿಕ ಅರ್ಥ” ಇರೋ ಒಪ್ಪಂದಗಳ ಬಗ್ಗೆ ಯಾಕೆ ಮಾತಾಡಿದ? ಅವನ ಕಾಲದಲ್ಲಿದ್ದ ಯೆಹೂದ್ಯರು ನಾವಿನ್ನೂ ಮೋಶೆಯ ನಿಯಮ ಪುಸ್ತಕದಲ್ಲಿರೋ ನಿಯಮಗಳನ್ನ ಪಾಲಿಸಲೇಬೇಕು ಅಂತ ಪಟ್ಟು ಹಿಡಿದ್ರೆ ಅವರು ಹಾಗರಳ ತರ ದಾಸರಾಗೇ ಇರ್ತಿದ್ರು. ಒಂದುವೇಳೆ ಅವರು ಅಬ್ರಹಾಮನ ‘ಸಂತಾನದ’ ಮುಖ್ಯ ಭಾಗವಾಗಿದ್ದ ಯೇಸು ಕ್ರಿಸ್ತನನ್ನ ಒಪ್ಕೊಂಡ್ರೆ ಸಾರಳ ತರ ಸ್ವತಂತ್ರರಾಗ್ತಿದ್ರು, ಅವ್ರಿಗೆ ಪಾಪ ಮತ್ತು ಸಾವಿಂದ ನಿಜವಾದ ಸ್ವಾತಂತ್ರ್ಯ ಸಿಗ್ತಿತ್ತು ಅನ್ನೋದನ್ನ ಅರ್ಥಮಾಡಿಸೋಕೆ ಈ ಒಪ್ಪಂದಗಳ ಬಗ್ಗೆ ಮಾತಾಡಿದ. (ಯೋಹಾ. 8:32-34) ಜನ್ರನ್ನ ಕ್ರಿಸ್ತನ ಹತ್ರ ನಡೆಸೋದೇ ನಿಯಮ ಒಪ್ಪಂದದ ಮುಖ್ಯ ಉದ್ದೇಶ ಆಗಿತ್ತು. ಒಂದುವೇಳೆ ಅವರು ಯೇಸುವನ್ನ ಒಪ್ಕೊಳ್ಳದೇ ಇದ್ರೆ ನಿಯಮ ಒಪ್ಪಂದದ ಈ ಉದ್ದೇಶ ನಿಜ ಆಗ್ತಿರಲಿಲ್ಲ.
ಪೌಲ ಈ ಪತ್ರವನ್ನ ಗಲಾತ್ಯ ಸಭೆಯವ್ರಿಗೆ ಬರೆದ. ಆ ಸಭೆಯಲ್ಲಿದ್ದ ತುಂಬ ಜನ ಯೆಹೂದ್ಯರಾಗಿರಲಿಲ್ಲ ಮತ್ತು ಅವರು ಯಾವತ್ತೂ ನಿಯಮ ಒಪ್ಪಂದದ ಕೆಳಗೆ ಇರಲಿಲ್ಲ. ಆದ್ರೆ ಕೆಲವು ಯೆಹೂದಿ ಸಂಪ್ರದಾಯವಾದಿಗಳು ಯೆಹೂದ್ಯರಲ್ಲದವರಿಗೆ ನಿಯಮ ಒಪ್ಪಂದದಲ್ಲಿದ್ದ ನಿಯಮಗಳನ್ನ ಪಾಲಿಸಬೇಕು, ಸುನ್ನತಿ ಮಾಡಿಸ್ಕೊಬೇಕು ಅಂತ ಒತ್ತಾಯ ಮಾಡ್ತಿದ್ರು. ಅದಕ್ಕೆ ಪೌಲ ಯೆಹೂದ್ಯರಲ್ಲದವರು ಕ್ರಿಸ್ತನಿಗೆ ಸೇರಿದ್ರಿಂದ ಅವ್ರಿಗೆ “ಸ್ವಾತಂತ್ರ್ಯ” ಸಿಕ್ಕಿದೆ, ಈಗ ಅವರು ಮತ್ತೆ ನಿಯಮಗಳನ್ನ ಪಾಲಿಸಬೇಕು ಅಂದ್ರೆ ಆ ನಿಯಮಗಳಿಗೆ ‘ಗುಲಾಮರಾಗ್ತಾರೆ.’ ಹೀಗೆ ಮಾಡೋದು ಮೂರ್ಖತನ ಅಂತ ಯೆಹೂದ್ಯರ ಜೊತೆ ತರ್ಕಿಸಿದ.—ಗಲಾ. 5:1, 10-14.
a ಕಾವಲಿನಬುರುಜು ಮಾರ್ಚ್ 15, 2006 ಪುಟ 10-12ರಲ್ಲಿ ಬಂದ ಮಾಹಿತಿಯನ್ನ ಈ ಲೇಖನದಲ್ಲಿ ಸರಿಪಡಿಸಲಾಗಿದೆ.