52 ಮಾರ್ಕ
‘ಅವನು ನನಗೆ ತುಂಬ ಸಹಾಯ ಮಾಡ್ತಾನೆ’
ಮಾರ್ಕ ಯುವಕನಾಗಿದ್ದಾಗ್ಲೇ ತುಂಬ ಧೈರ್ಯ ತೋರಿಸಿದ. ಯೇಸುವನ್ನ ಆಗ ತಾನೇ ಆಯುಧಗಳು ಹಿಡ್ಕೊಂಡಿದ್ದ ಜನ್ರ ಗುಂಪು ಬಂಧಿಸಿ ಕರ್ಕೊಂಡು ಹೋಗ್ತಾ ಇತ್ತು. ಅವನ ಅಪೊಸ್ತಲರೆಲ್ಲ ತಮ್ಮ ಗುರುನ ಬಿಟ್ಟು ಓಡಿಹೋಗಿದ್ರು. ಆದ್ರೆ “ಒಬ್ಬ ಯುವಕ” ಧೈರ್ಯವಾಗಿ ಯೇಸುನ ಹಿಂಬಾಲಿಸ್ತಾ ಹೋದ ಅಂತ ಬೈಬಲ್ ಹೇಳುತ್ತೆ. ಆಗ ಅವನು ಆ ಜನ್ರ ಕಣ್ಣಿಗೆ ಬಿದ್ದ. ಅವರು ಅವನನ್ನ ಹಿಡಿಯೋಕೆ ಪ್ರಯತ್ನ ಮಾಡಿದ್ರು. ಆದ್ರೆ ಅವನು ಅವ್ರ ಕೈಗೆ ಸಿಗ್ಲಿಲ್ಲ, ಅವನ ಬಟ್ಟೆ ಮಾತ್ರ ಸಿಕ್ತು. ಅದಕ್ಕೆ ಅವನು ತನ್ನ “ಒಳ ಉಡುಪಲ್ಲಿ” ಹಾಗೇ ಓಡಿಹೋದ. ಈ ಘಟನೆ ಮಾರ್ಕ ಪುಸ್ತಕದಲ್ಲಿ ಮಾತ್ರ ಇರೋದ್ರಿಂದ ಆ ಯುವ ವ್ಯಕ್ತಿ ಮಾರ್ಕನೇ ಅಂತ ತುಂಬ ಜನ ನಂಬ್ತಾರೆ.
ಮಾರ್ಕನಿಗೆ ಯೋಹಾನ ಅನ್ನೋ ಇನ್ನೊಂದು ಹೆಸ್ರೂ ಇತ್ತು. ಅವನು ಯೆರೂಸಲೇಮಲ್ಲಿ ಬಹುಶಃ ಅವನ ಅಮ್ಮನ ಜೊತೆ ವಾಸ ಮಾಡ್ತಿದ್ದ, ಅವರು ಶ್ರೀಮಂತರು ಅಂತ ಕಾಣ್ಸುತ್ತೆ. ಯೇಸು ತೀರಿಹೋದ ಮೇಲೆ ಆತನ ಶಿಷ್ಯರೆಲ್ಲರೂ ಅವ್ರ ಮನೆಯಲ್ಲೇ ಸಭೆ ಸೇರ್ತಿದ್ರು. ಅದಕ್ಕೆ ಪೇತ್ರನನ್ನ ಮಧ್ಯರಾತ್ರಿಲಿ ಒಬ್ಬ ದೇವದೂತ ಜೈಲಿಂದ ಬಿಡಿಸಿದಾಗ ಅವನು ನೇರವಾಗಿ ಬಂದಿದ್ದು ಮಾರ್ಕನ ಮನೆಗೇ. ಮಾರ್ಕನಿಗೆ ಖಂಡಿತವಾಗ್ಲೂ ಯೇಸುವಿನ ಅಪೊಸ್ತಲರ ಮತ್ತು ಶಿಷ್ಯರ ಒಳ್ಳೇ ಪರಿಚಯ ಇತ್ತು. ಅವನು ಅವ್ರಿಂದಾನೇ ಧೈರ್ಯ ತೋರಿಸೋದ್ರ ಬಗ್ಗೆ ಎಷ್ಟೋ ವಿಷ್ಯಗಳನ್ನ ಕಲಿತಿರಬಹುದು.
ಸುಮಾರು ಕ್ರಿಸ್ತ ಶಕ 46ರಲ್ಲಿ, ಮಾರ್ಕನ ಸಂಬಂಧಿಕನಾದ ಬಾರ್ನಬ ಅಪೊಸ್ತಲ ಪೌಲನ ಜೊತೆ ಯೆರೂಸಲೇಮಿಗೆ ಬಂದ. ಆಗ ಅವ್ರಿಗೆ ಯುವ ಮಾರ್ಕನಿಗೆ ತರಬೇತಿ ಕೊಟ್ರೆ ಒಳ್ಳೇದು ಅಂತ ಅನಿಸ್ತು. ಅದಕ್ಕೆ ಅವರು ಅಂತಿಯೋಕ್ಯಕ್ಕೆ ವಾಪಸ್ ಹೋಗುವಾಗ ಮಾರ್ಕನನ್ನೂ ಕರ್ಕೊಂಡು ಹೋದ್ರು. ಸುಮಾರು ಒಂದು ವರ್ಷ ಆದ್ಮೇಲೆ ಪೌಲ ಮತ್ತು ಬಾರ್ನಬ ತಮ್ಮ ಜೊತೆ ಮಿಷನರಿ ಪ್ರಯಾಣ ಮಾಡೋಕೆ ಮಾರ್ಕನನ್ನೂ ಕರೆದ್ರು! ಆಗ ಮಾರ್ಕ ಧೈರ್ಯವಾಗಿ ಮುಂದೆ ಬಂದ. ಆ ಹುರುಪಿನ ಮಿಷನರಿಗಳಿಗೆ ಅವನೊಬ್ಬ ‘ಸಹಾಯಕನಾಗಿರಬೇಕಿತ್ತು.’ ಇದನ್ನ ಮಾಡೋಕೆ ಅವನಿಗೆ ತುಂಬ ದೀನತೆ ಬೇಕಿತ್ತು.
ಆ ಕಾಲದಲ್ಲಿ ಪ್ರಯಾಣ ಮಾಡೋದು ಅಷ್ಟು ಸುಲಭ ಆಗಿರ್ಲಿಲ್ಲ. ಅದ್ರಲ್ಲಿ ತುಂಬ ಅಪಾಯಗಳು ಇರ್ತಿತ್ತು. ಪೌಲ ತನ್ನ ಎಷ್ಟೋ ಪ್ರಯಾಣಗಳಲ್ಲಿ ಅವನಿಗೆ “ನದಿಗಳಿಂದ, ದರೋಡೆಕೋರರಿಂದ . . . ಪಟ್ಟಣದಲ್ಲಿ, ಕಾಡಲ್ಲಿ, ಸಮುದ್ರದಲ್ಲಿ . . . ಅಪಾಯಗಳು ಬಂದ್ವು” ಅಂತ ಬರೆದಿದ್ದಾನೆ. (2 ಕೊರಿಂ. 11:26) ಪೌಲ ಮತ್ತು ಬಾರ್ನಬನಿಗೆ ಸಭೆಯಲ್ಲಿ ತುಂಬ ಕೆಲ್ಸ ಇದ್ದಿದ್ರಿಂದ ಅವ್ರಿಗೆ ಮಾರ್ಕನ ಸಹಾಯ ಬೇಕಿತ್ತು. ಅವ್ರಿಗೆ ಬೇಕಾದ ಸಹಾಯ ಮಾಡೋಕೆ ಮಾರ್ಕ ರೆಡಿ ಇರಬೇಕಿತ್ತು. ಈ ಕೆಲ್ಸ ಮಾಡ್ತಾ-ಮಾಡ್ತಾ ಅವನಿಗೆ ಕಷ್ಟ ಅನಿಸ್ತಾ? ಅದ್ರ ಬಗ್ಗೆ ಬೈಬಲ್ ಏನೂ ಹೇಳಲ್ಲ. ಆದ್ರೆ ಪೌಲ ಮತ್ತು ಬಾರ್ನಬ ಪಂಫುಲ್ಯಕ್ಕೆ ಬಂದಾಗ ಅವನು ಅವ್ರನ್ನ ಬಿಟ್ಟು ಯೆರೂಸಲೇಮಲ್ಲಿದ್ದ ತನ್ನ ಮನೆಗೆ ವಾಪಸ್ ಹೋದ ಅಂತ ಬೈಬಲ್ ಹೇಳುತ್ತೆ. ಅವನು ಹೀಗೆ ಮಾಡಿದ್ರಿಂದ ಅವರಿಬ್ರಿಗೂ ತುಂಬ ಬೇಜಾರಾಯ್ತು. ಅದ್ರಲ್ಲೂ ಪೌಲನಿಗಂತೂ ಸಿಕ್ಕಾಪಟ್ಟೆ ಬೇಜಾರಾಗೋಯ್ತು.
ತಮ್ಮ ಮೊದಲ ಮಿಷನರಿ ಪ್ರಯಾಣ ಮುಗಿಸಿ ಬಂದ್ಮೇಲೆ ಪೌಲ ಮತ್ತು ಬಾರ್ನಬ ತಮ್ಮ ಎರಡನೇ ಪ್ರಯಾಣದ ಬಗ್ಗೆ ಯೋಚ್ನೆ ಮಾಡೋಕೆ ಶುರು ಮಾಡಿದ್ರು. ಆಗ ಬಾರ್ನಬನಿಗೆ ಮಾರ್ಕನನ್ನ ಮತ್ತೆ ತಮ್ಮ ಜೊತೆ ಕರ್ಕೊಂಡು ಹೋಗಿ ಅವನಿಗೆ ಇನ್ನೊಂದು ಅವಕಾಶ ಕೊಡೋಣ ಅಂತ ಅನಿಸ್ತು. ಆದ್ರೆ ಪೌಲನಿಗೆ ಅದು ಒಂಚೂರು ಇಷ್ಟ ಆಗ್ಲಿಲ್ಲ, ಮಾರ್ಕನನ್ನ ನಂಬಕ್ಕಾಗಲ್ಲ ಅಂತ ಅನಿಸ್ತು. ಬಾರ್ನಬ ‘ಮಾರ್ಕನನ್ನ ಕರ್ಕೊಂಡು ಹೋಗೋಣ’ ಅಂತ ಹೇಳಿದ್ರೆ, ಪೌಲ ‘ಬೇಡ’ ಅಂತ ಹೇಳ್ತಿದ್ದ. ಹೀಗೆ ‘ಅವ್ರಿಬ್ರ ಮಧ್ಯೆ ದೊಡ್ಡ ಜಗಳ ಆಯ್ತು.’ ಆಮೇಲೆ ಬಾರ್ನಬ ಮಾರ್ಕನನ್ನ ಕರ್ಕೊಂಡು ಸೈಪ್ರಸ್ಗೆ ಹೋಗಿ ಅಲ್ಲಿ ಸಿಹಿಸುದ್ದಿ ಸಾರೋ ಕೆಲ್ಸ ಮುಂದುವರೆಸಿದ. ಪೌಲ ಸೀಲನನ್ನ ಕರ್ಕೊಂಡು ಅವನ ಪ್ರಯಾಣ ಮುಂದುವರೆಸಿದ.
ಮಾರ್ಕನಿಗೆ ಪೌಲನ ಮೇಲೆ ತುಂಬ ಗೌರವ ಇತ್ತು. ಅದಕ್ಕೆ ‘ಅಂಥ ವ್ಯಕ್ತಿಗೆ ನನ್ನಿಂದ ಬೇಜಾರಾಗಿದೆ, ನನ್ನಿಂದ ಇಬ್ರು ಆಪ್ತ ಸ್ನೇಹಿತರು ದೂರ-ದೂರ ಆಗಿದ್ದಾರೆ’ ಅಂತ ಗೊತ್ತಾದಾಗ ಮಾರ್ಕನಿಗೆ ತುಂಬ ಬೇಜಾರಾಗಿರಬಹುದು. ಹಾಗಂತ ಅವನು ಇದೇ ನೋವಲ್ಲಿ ಕುಗ್ಗಿ ಹೋಗಿಬಿಟ್ನಾ? ಅಥವಾ ‘ಪೌಲ ನಂಗೆ ಇನ್ನೊಂದು ಅವಕಾಶ ಕೊಡದೇ ಅನ್ಯಾಯ ಮಾಡಿದ’ ಅಂತ ದ್ವೇಷ ಬೆಳೆಸ್ಕೊಂಡ್ನಾ? ಖಂಡಿತ ಇಲ್ಲ.
ಮಾರ್ಕ ಒಂದೊಳ್ಳೆ ಅವಕಾಶನ ಕಳ್ಕೊಂಡ, ಆದ್ರೂ ಬೇಜಾರು ಮಾಡ್ಕೊಳ್ಳಿಲ್ಲ, ಒಳ್ಳೇದು ಮಾಡೋದನ್ನ ಬಿಡ್ಲಿಲ್ಲ
ಮಾರ್ಕ ಸಹೋದರ ಸಹೋದರಿಯರಿಗೆ ಸಹಾಯ ಮಾಡೋದನ್ನ ಮುಂದುವರೆಸಿದ. ಸುಮಾರು ಕ್ರಿಸ್ತ ಶಕ 60-61ರ ಸಮಯದಲ್ಲಿ ಪೌಲ ರೋಮ್ನ ಗೃಹ ಬಂಧನದಲ್ಲಿದ್ದ. ಆಗ ಅವನು ತನ್ನ ಪತ್ರದಲ್ಲಿ, ‘ಮಾರ್ಕ ನನ್ನ ಜೊತೆ ಇದ್ದಾನೆ, ಅವನು ನನ್ನನ್ನ ಬಲಪಡಿಸ್ತಾ ಸಹಾಯ ಮಾಡಿದ್ದಾನೆ’ ಅಂತ ಬರೆದ. ಇದಾದ್ಮೇಲೆ ಅಪೊಸ್ತಲ ಪೇತ್ರ ಕ್ರಿಸ್ತ ಶಕ 62-64ರ ಒಳಗೆ ಬರೆದ ಪತ್ರದಲ್ಲಿ ಮಾರ್ಕನ ಬಗ್ಗೆ ಬರೆದಿದ್ದಾನೆ. ವಯಸ್ಸಾಗ್ತಿದ್ದ ಈ ಅಪೊಸ್ತಲನನ್ನ ಪ್ರೋತ್ಸಾಹಿಸೋಕೆ ಮಾರ್ಕ ಅಷ್ಟು ದೂರದಲ್ಲಿದ್ದ ಬಾಬೆಲ್ಗೆ ಪ್ರಯಾಣ ಮಾಡಿದ್ದ ಅನ್ಸುತ್ತೆ. ಪೇತ್ರ ಮಾರ್ಕನನ್ನ “ನನ್ನ ಮಗ” ಅಂತ ಕರೆದಿದ್ದಾನೆ. ಅವನು ಹೀಗೆ ಹೇಳಬೇಕಂದ್ರೆ ಮಾರ್ಕ ಅವನಿಗೆ ಎಷ್ಟು ಸಹಾಯ ಮಾಡಿರಬೇಕಲ್ವಾ! ಅಪೊಸ್ತಲ ಪೇತ್ರ ತಾನು ಯೇಸು ಜೊತೆ ಇದ್ದಾಗ ಆದ ಅನುಭವಗಳನ್ನ, ಕಣ್ಣಾರೆ ನೋಡಿದ ಎಷ್ಟೋ ವಿಷ್ಯಗಳನ್ನ ಖಂಡಿತ ಮಾರ್ಕನಿಗೆ ಹೇಳಿರ್ತಾನೆ. ಮಾರ್ಕ ದೇವರ ಪ್ರೇರಣೆಯಿಂದ ಬಹುಶಃ ರೋಮ್ನಲ್ಲಿದ್ದಾಗ ಒಂದು ಪುಸ್ತಕ ಬರೆದ. ಅದ್ರಲ್ಲಿ ಅವನು ಪೇತ್ರ ಹೇಳಿದ ಎಷ್ಟೋ ವಿಷ್ಯಗಳನ್ನ ಸೇರಿಸಿದ್ದಾನೆ.
ಮಾರ್ಕನ ಹೆಸ್ರು ಬೈಬಲಲ್ಲಿ ಕೊನೇ ಸಲ ಕಾಣಿಸೋದು ಪೌಲ ತಿಮೊತಿಗೆ ಬರೆದ ಪತ್ರದಲ್ಲಿ. ಆ ಸಮಯದಲ್ಲಿ ಪೌಲ ಮತ್ತೆ ಜೈಲಲ್ಲಿ ಇದ್ದಿದ್ರಿಂದ ತಿಮೊತಿಗೆ, “ಮಾರ್ಕನನ್ನ ನಿನ್ನ ಜೊತೆ ಕರ್ಕೊಂಡು ಬಾ, ಯಾಕಂದ್ರೆ ಅವನು ಸೇವೆಯಲ್ಲಿ ನನಗೆ ತುಂಬ ಸಹಾಯ ಮಾಡ್ತಾನೆ” ಅಂತ ಹೇಳಿದ. ಪೌಲನನ್ನ ಭೇಟಿ ಮಾಡೋಕೆ, ಅವನ ಕೊನೇ ದಿನಗಳಲ್ಲಿ ಅವನ ಜೊತೆ ಇದ್ದು ಅವನನ್ನ ಬಲಪಡಿಸೋಕೆ ಮಾರ್ಕ ಮತ್ತು ತಿಮೊತಿಗೂ ಆಸೆ ಇತ್ತು. ಮಾರ್ಕ ಅದೆಷ್ಟೇ ಬೇಜಾರಾದ್ರೂ, ಕುಗ್ಗಿ ಹೋಗೋ ಅದೆಂಥ ಪರಿಸ್ಥಿತಿನೇ ಬಂದ್ರೂ ಯೆಹೋವನ ಸೇವೆನ ಯಾವತ್ತೂ ಬಿಡ್ಲಿಲ್ಲ, ಸಹೋದರ ಸಹೋದರಿಯರಿಗೆ ಸಹಾಯ ಮಾಡೋದನ್ನ ಮುಂದುವರೆಸಿದ. ಅದಕ್ಕೆ ಧೈರ್ಯ ತೋರಿಸಿದ ಮಾರ್ಕನನ್ನ ಯೆಹೋವ ತುಂಬ ಪ್ರೀತಿಸಿದನು.
ಈ ಘಟನೆ ಬಗ್ಗೆ ಬೈಬಲಲ್ಲಿ ಓದಿ:
ಉತ್ರ ಹುಡುಕಿ:
ಮಾರ್ಕ ಹೇಗೆಲ್ಲಾ ಧೈರ್ಯ ತೋರಿಸಿದ?
ಉತ್ರ ಹುಡುಕಿ:
1. ಮಾರ್ಕ ಶ್ರೀಮಂತ ಕುಟುಂಬದಿಂದ ಬಂದಿದ್ದ ಅಂತ ನಾವು ಯಾಕೆ ಹೇಳಬಹುದು? (w10 3/15 ಪುಟ 6 ಪ್ಯಾರ 6–ಪುಟ 7 ಪ್ಯಾರ 1)
2. ಬಾರ್ನಬ ಮತ್ತು ಪೌಲನಿಗೆ “ಸಹಾಯಕ ಆಗಿದ್ದ” ಮಾರ್ಕ ಬಹುಶಃ ಯಾವೆಲ್ಲ ಕೆಲ್ಸಗಳನ್ನ ಮಾಡಬೇಕಿತ್ತು? (ಅ. ಕಾ. 13:5; w10 3/15 ಪುಟ 7 ಪ್ಯಾರ 5)
3. ಮಾರ್ಕ ಪ್ರಯಾಣ ಮಾಡಿದ ಕೆಲವು ಜಾಗಗಳು ಯಾವುದು? (w10 3/15 ಪುಟ 8 ಪ್ಯಾರ 6-8) ಎ
ಚಿತ್ರ ಎ: ಮಾರ್ಕ ಈ ಜಾಗಗಳನ್ನ ಭೇಟಿ ಮಾಡಿರಬಹುದು
4. ಮಾರ್ಕನ ಪುಸ್ತಕದಲ್ಲಿರೋ ಕೆಲವು ವಿಷ್ಯಗಳನ್ನ ಪೇತ್ರನೇ ಹೇಳಿರಬಹುದು ಅನ್ನೋದಕ್ಕೆ ಒಂದು ಉದಾಹರಣೆ ಕೊಡಿ. (w08 2/1 ಪುಟ 26 ಪ್ಯಾರ 1-wcgr)
ನಮಗೇನು ಪಾಠ?
ಬೈಬಲಲ್ಲಿ ಎಲ್ಲೂ ಮಾರ್ಕನನ್ನ ಒಬ್ಬ ಅಪೊಸ್ತಲ ಅಂತಾಗ್ಲಿ ಅಥವಾ ಪ್ರವಾದಿ ಅಂತಾಗ್ಲಿ ಹೇಳಿಲ್ಲ. ಹಾಗಿದ್ರೂ ಅವನು ದೀನತೆಯಿಂದ ಬೇರೆಯವ್ರ ಸೇವೆ ಮಾಡಿದ. ನಾವು ಹೇಗೆ ಅವನ ತರ ಬೇರೆಯವ್ರ ಸೇವೆ ಮಾಡಬಹುದು?
ಮಾರ್ಕ ಪೌಲನ ಜೊತೆ ಸೇವೆ ಮಾಡೋ ಸುಯೋಗನ ಸ್ವಲ್ಪ ಸಮಯದ ತನಕ ಕಳ್ಕೊಂಡ. ಆದ್ರೂ ಅವನು ಯೆಹೋವನಿಗೆ ನಿಯತ್ತಾಗಿದ್ದ. ಒಂದುವೇಳೆ ನಾವು ಸಭೆಯಲ್ಲಿ ಯಾವುದಾದ್ರೂ ಸುಯೋಗನ ಕಳ್ಕೊಂಡ್ರೆ ಅವನಿಂದ ಏನು ಕಲಿಬಹುದು? ಬಿ
ಚಿತ್ರ ಬಿ
ಮಾರ್ಕನ ತರ ನೀವು ಹೇಗೆಲ್ಲಾ ಧೈರ್ಯ ತೋರಿಸಬೇಕಂತ ಇದ್ದೀರಾ?
ಇದ್ರ ಬಗ್ಗೆ ಯೋಚ್ನೆ ಮಾಡಿ
ಈ ಘಟನೆ ಯೆಹೋವನ ಬಗ್ಗೆ ನಂಗೇನು ಕಲಿಸುತ್ತೆ?
ಈ ಘಟನೆಗೂ ಯೆಹೋವನ ಉದ್ದೇಶಕ್ಕೂ ಏನ್ ಸಂಬಂಧ?
ಮಾರ್ಕನಿಗೆ ಕ್ರಿಸ್ತನ ಜೊತೆ ಸ್ವರ್ಗದಲ್ಲಿ ಆಳ್ವಿಕೆ ಮಾಡೋಕೆ ಅವಕಾಶ ಸಿಕ್ತು ಅನ್ನೋ ವಿಷ್ಯ ಯಾಕೆ ನಿಮಗೆ ಖುಷಿ ಕೊಡುತ್ತೆ?
ಇದನ್ನೂ ನೋಡಿ
ಮಾರ್ಕ ಪುಸ್ತಕದಲ್ಲಿರೋ ವಿಶೇಷತೆಗಳೇನು?
ಮಾರ್ಕನ ಉದಾಹರಣೆಯನ್ನ ಬಳಸಿ ಯೆಹೋವನ ಸೇವೆನ ಬಿಡದೇ ಇರೋಕೆ ಮಕ್ಕಳಿಗೆ ಕಲಿಸಿ.