ಯೇಸುವಿನ ಜೀವನ ಮತ್ತು ಶುಶ್ರೂಷೆ
ಯೇಸು—ಪರಲೋಕದ ನಿಜವಾದ ರೂಟ್ಟಿ
ಆ ದಿನವು ನಿಜವಾಗಿಯೂ ಘಟನಾತ್ಮಕವಾಗಿತ್ತು. ಯೇಸುವು ಅದ್ಭುತಕರ ರೀತಿಯಲ್ಲಿ ಸಾವಿರಾರು ಜನರನ್ನು ಉಣಿಸಿ, ಜನರು ಆತನನ್ನು ಅರಸನನ್ನಾಗಿ ಮಾಡಬೇಕೆಂದಿದ್ದಾಗ ಅವನು ಅವರಿಂದ ತಪ್ಪಿಸಿಕೊಳ್ಳುತ್ತಾನೆ. ಆ ರಾತ್ರಿ ಅವನು ಗಲಿಲಾಯದ ತುಫಾನು ಇದ್ದ ಸಮುದ್ರದ ಮೇಲೆ ನಡೆದು ಕೊಂಡು ಹಾಯ್ದು ಹೋಗುತ್ತಾನೆ; ಬಿರುಗಾಳಿಯಿಂದೊಡಗೂಡಿದ ನೀರಿನ ಮೇಲೆ ಪೇತ್ರನು ನಡೆಯಲು ಆರಂಭಿಸಿದಾಗ, ಅವನು ಮುಳುಗಲಾರಂಭಿಸಿದಾಗ ಅವನನ್ನು ರಕ್ಷಿಸುತ್ತಾನೆ; ಹಡಗು ಒಡೆದು ನಷ್ಟ ಹೊಂದುವುದರಿಂದ ತನ್ನ ಶಿಷ್ಯರನ್ನು ಪಾರುಗೊಳಿಸಲು ತೆರೆಗಳನ್ನು ಶಾಂತಗೊಳಿಸುತ್ತಾನೆ.
ಮರುದಿನ, ಗಲಿಲಾಯ ಸಮುದ್ರದ ಈಶಾನ್ಯ ಪ್ರದೇಶದಲ್ಲಿ ಯೇಸುವು ಅದ್ಭುತಕರವಾಗಿ ಉಣಿಸಿದ ಜನರು, ಯೇಸುವನ್ನು ಕಪೆರ್ನೌಮಿನ ಹತ್ತಿರ ಅವನನ್ನು ಕಂಡುಕೊಳ್ಳುತ್ತಾರೆ. ಅವರು ಅವನಿಂದ ಇನ್ನೊಂದು ಧಮಾರ್ಥ ಊಟ ಸಿಗುತ್ತದೆಂಬ ನಿರೀಕ್ಷೆಯಿಂದ ಅವನನ್ನು ಹುಡುಕಿಕೊಂಡು ಬಂದಿರುತ್ತಾರೆಂಬ ಕಾರಣದಿಂದ ಯೇಸುವು ಅವರನ್ನು ಗದರಿಸುತ್ತಾನೆ. ಕೆಟ್ಟುಹೋಗುವ ಆಹಾರಕ್ಕಾಗಿ ದುಡಿಯದೇ, ನಿತ್ಯಜೀವಕ್ಕೆ ಉಳಿಯುವ ಆಹಾರಕ್ಕಾಗಿ ದುಡಿಯುವಂತೆ ಅವರನ್ನು ಒತ್ತಾಯಿಸುತ್ತಾನೆ. ಆದುದರಿಂದ ಜನರು ವಿಚಾರಿಸುತ್ತಾರೆ: “ದೇವರಿಗೆ ಮೆಚ್ಚಿಕೆಯಾದ ಕೆಲಸಗಳನ್ನು ನಾವು ನಡಿಸಬೇಕಾದರೆ ಏನು ಮಾಡಬೇಕು?”
ಅತ್ಯುತ್ಕೃಷ್ಟ ಮೌಲ್ಯತೆಯ ಒಂದು ಕೆಲಸವನ್ನು ಯೇಸುವು ಹೆಸರಿಸುತ್ತಾನೆ: “ದೇವರು ಮೆಚ್ಚುವ ಕೆಲಸ ಯಾವದೆಂದರೆ ಆತನು ಕಳುಹಿಸಿ ಕೊಟ್ಟವನನ್ನು ನೀವು ನಂಬುವುದೇ,” ಎಂದವನು ವಿವರಿಸುತ್ತಾನೆ.
ಆತನು ಅಷ್ಟೆಲ್ಲಾ ಅದ್ಭುತಗಳನ್ನು ಮಾಡಿದ್ದರೂ, ಜನರು ಆತನ ಮೇಲೆ ವಿಶ್ವಾಸವಿಡುವುದಿಲ್ಲ. ಒಂದು ದಿನದ ಮುಂಚೆ ಅವನು ಅದ್ಭುತಕರವಾಗಿ 5,000 ಪುರುಷರಿಗೂ, ಅಲ್ಲದೇ ಹೆಂಗಸರು, ಮಕ್ಕಳಿಗೂ ಉಣಿಸಿ ತೃಪ್ತಿಗೊಳಿಸಿದ್ದನು. ಆದರೂ, ನಂಬಲು ಅಸಾಧ್ಯವಾದ ರೀತಿಯಲ್ಲಿ ಅವರು ಕೇಳುವುದು: “ಹಾಗಾದರೆ ನಾವು ನೋಡಿ ನಿನ್ನ ಮಾತನ್ನು ನಂಬುವಂತೆ ಏನು ಸೂಚಕ ಕಾರ್ಯ ಮಾಡುತ್ತೀ? ನಮ್ಮ ಹಿರಿಯರು ಅಡವಿಯಲ್ಲಿ ಮನ್ನಾ ತಿಂದರು; ಪರಲೋಕದಿಂದ ರೊಟ್ಟಿಯನ್ನು ಅವರಿಗೆ ತಿನ್ನುವುದಕ್ಕೆ ಕೊಟ್ಟನು ಎಂದು ಶಾಸ್ತ್ರ ದಲ್ಲಿ ಬರೆದದೆಯಲ್ಲಾ, ನೀನು ಏನು ಕೆಲಸ ನಡಿಸುತ್ತೀ?”
ಸೂಚಕ ಕಾರ್ಯಕ್ಕಾಗಿ ಅವರ ಕೇಳಿಕೆಗೆ ಪ್ರತಿವರ್ತನೆಯಾಗಿ, ಅದ್ಭುತಕರ ಒದಗಿಸುವಿಕೆಗಳ ಉಗಮನು ಯಾರೆಂದು ಯೇಸುವು ಸ್ಪಷ್ಟ ಪಡಿಸುತ್ತಾನೆ, ಅವನಂದದ್ದು: “ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಟ್ಟವನಲ್ಲ; ನನ್ನ ತಂದೆಯು ಪರಲೋಕದಿಂದ ಬರುವ ನಿಜವಾದ ರೊಟ್ಟಿಯನ್ನು ನಿಮಗೆ ಕೊಡುತ್ತಾನೆ. ದೇವರು ಕೊಡುವ ಆ ರೊಟ್ಟಿ ಯಾವದೆಂದರೆ ಪರಲೋಕದಿಂದ ಇಳಿದು ಬಂದು ಲೋಕಕ್ಕೆ ಜೀವವನ್ನು ಉಂಟುಮಾಡುವಂಥದೇ.”
“ಸ್ವಾಮೀ,” ಜನರು ಅನ್ನುತ್ತಾರೆ, “ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು.”
ಯೇಸುವು ವಿವರಿಸುವುದು, “ಜೀವ ಕೊಡುವ ರೊಟ್ಟಿಯು ನಾನೇ. ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವುದಿಲ್ಲ, ನನ್ನನ್ನು ನಂಬುವವನಿಗೆ ಎಂದಿಗೂ ನೀರಡಿಕೆಯಾಗುವುದಿಲ್ಲ. ಆದರೆ ನೀವು ನನ್ನನ್ನು ನೋಡಿದ್ದರೂ ನಂಬದೇ ಇದ್ದೀರಿ ಎಂದು ನಿಮಗೆ ಹೇಳಿದೆನಲ್ಲವೇ. ತಂದೆಯು ನನಗೆ ಕೊಡುವಂಥರೆಲ್ಲರೂ ನನ್ನ ಬಳಿಗೆ ಬರುವರು; ಮತ್ತು ನನ್ನ ಬಳಿಗೆ ಬರುವವನನ್ನು ನಾನು ತಳ್ಳಿ ಬಿಡುವುದೇ ಇಲ್ಲ. ನನ್ನ ಚಿತ್ತದಂತೆ ನಡೆಯುವುದಕ್ಕಾಗಿ ನಾನು ಬಂದಿಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವುದಕ್ಕೆ ಪರಲೋಕದಿಂದ ಬಂದೆನು. ನನ್ನನ್ನು ಕಳುಹಿಸಿದಾತನ ಚಿತ್ತವು ಏನಂದರೆ ಆತನು ನನಗೆ ಕೊಟ್ಟವರಲ್ಲಿ ಒಬ್ಬನನ್ನೂ ನಾನು ಕೆಡಗೊಡಿಸದೆ ಅವನನ್ನು ಕಡೇ ದಿನದಲ್ಲಿ ಎಬ್ಬಿಸಬೇಕೆಂದೇ. ಮಗನನ್ನು ನೋಡಿ ಆತನನ್ನು ನಂಬುವ ಪ್ರತಿಯೊಬ್ಬನಿಗೆ ನಿತ್ಯಜೀವವು ಸಿಕ್ಕಬೇಕೆಂಬದೇ ನನ್ನ ತಂದೆಯ ಚಿತ್ತವಾಗಿದೆ.”
“ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ” ಎಂದು ಯೇಸುವು ಹೇಳಿದ ಕಾರಣದಿಂದ ಯೆಹೂದ್ಯರು ಗುಣುಗುಟ್ಟಲಾರಂಭಿಸಿದರು. ಅವರು ಅವನನ್ನು ಒಬ್ಬ ಮಾನವ ತಂದೆತಾಯಿಯ ಮಗನಿಗಿಂತಲೂ ಹೆಚ್ಚಿನವನಾಗಿ ಕಾಣಶಕ್ತರಾಗಿರಲಿಲ್ಲ ಮತ್ತು ನಜರೇತಿನ ಜನರು ಹೇಳಿದಂತಹ ರೀತಿಯಲ್ಲಿಯೇ ಅವರು ಅಡ್ಡಿ ಹೇಳಲಾರಂಭಿಸಿದರು: “ಇವನು ಯೋಸೇಫನ ಮಗನಾದ ಯೇಸು ಅಲ್ಲವೇ. ಇವನ ತಂದೆತಾಯಿಗಳನ್ನು ನಾವು ಬಲ್ಲೆವಲ್ಲವೇ. ಈಗ ಇವನು ಪರಲೋಕದಿಂದ ಇಳಿದು ಬಂದಿದ್ದೇನೆಂದು ಹೇಳುವುದು ಹೇಗೆ?”
ಯೇಸುವು ಪ್ರತಿವರ್ತಿಸುವುದು: “ನಿಮ್ಮ ನಿಮ್ಮೊಳಗೆ ಗುಣುಗುಟ್ಟಬೇಡಿರಿ. ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು; ಮತ್ತು ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಅವರೆಲ್ಲರು ದೇವರಿಂದ ಶಿಕ್ಷಿತರಾಗಿರುವರು ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದದೆ; ತಂದೆಯಿಂದ ಕೇಳಿ ಕಲಿತವರೆಲ್ಲರು ನನ್ನ ಬಳಿಗೆ ಬರುತ್ತಾರೆ. ಯಾವನಾದರೂ ತಂದೆಯನ್ನು ನೋಡಿದ್ದಾನೆಂದು ತಿಳಿಯಬೇಡಿರಿ; ದೇವರ ಬಳಿಯಿಂದ ಬಂದವನೊಬ್ಬನೇ ತಂದೆಯನ್ನು ನೋಡಿದ್ದಾನೆ. ನಂಬಿರುವವನು ನಿತ್ಯಜೀವವನ್ನು ಹೊಂದಿದ್ದಾನೆಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ.”
ಮುಂದುವರಿಸುತ್ತಾ ಯೇಸುವು ಪುನರಾವರ್ತಿ ಹೇಳುವುದು: “ಜೀವಕೊಡುವ ರೊಟ್ಟಿಯು ನಾನೇ. ನಿಮ್ಮ ಹಿರಿಯರು ಅಡವಿಯಲ್ಲಿ ಮನ್ನಾ ತಿಂದರೂ ಸತ್ತು ಹೋದರು; ಪರಲೋಕದಿಂದ ಇಳಿದು ಬರುವ ರೊಟ್ಟಿ ಎಂಥದೆಂದರೆ ಅದನ್ನು ತಿಂದವನು ಸಾಯುವುದಿಲ್ಲ. ಪರಲೋಕದಿಂದ ಇಳಿದು ಬರುವ ಜೀವವುಳ್ಳ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು.” ಹೌದು, ದೇವರು ಕಳುಹಿಸಿ ಕೊಟ್ಟ ಯೇಸುವಿನಲ್ಲಿ ವಿಶ್ವಾಸವಿಡುವ ಮೂಲಕ ಜನರಿಗೆ ನಿತ್ಯಜೀವ ದೊರಕುತ್ತದೆ. ಮನ್ನಾವಾಗಲೀ, ಇತರ ಯಾವುದೇ ಅಂಥಹ ರೊಟ್ಟಿಯಾಗಲೀ ಅದನ್ನು ಒದಗಿಸಲು ಅಶಕ್ಯವು !
ಕಪೆರ್ನೌಮಿನಲ್ಲಿ ಯೇಸುವನ್ನು ಜನರು ಕಂಡುಕೊಂಡ ಸ್ವಲ್ಪ ಸಮಯದ ನಂತರ ಪ್ರಾಯಶಃ ಪರಲೋಕದಿಂದ ಬರುವ ರೊಟ್ಟಿಯ ಚರ್ಚೆಯು ಆರಂಭಿಸಿರಬೇಕು. ಅದು ಮುಂದುವರಿದು, ಕಪೆರ್ನೌಮಿನ ಸಭಾಮಂದಿರವೊಂದರಲ್ಲಿ ಯೇಸುವು ಉಪದೇಶಿಸಲಾರಂಭಿಸಿದಾಗ ಒಂದು ಅತ್ಯುನ್ನತ ಮಟ್ಟಕ್ಕೆ ಅದು ತಲುಪಿತು. ಯೋಹಾನ 6:26-51, 59; ಕೀರ್ತನೆ 78:24; ಯೆಶಾಯ 54:13; ಮತ್ತಾಯ 13:55-57.
◆ ಪರಲೋಕದಿಂದ ಬರುವ ರೊಟ್ಟಿಯ ಕುರಿತಾದ ಯೇಸುವಿನ ಚರ್ಚೆಯ ಮೊದಲು ಯಾವ ಘಟನೆಗಳು ಸಂಭವಿಸಿದ್ದವು?
◆ ಈಗಾಗಲೇ ಯೇಸುವು ಏನು ಮಾಡಿದ್ದನೋ, ಅದರ ನೋಟದಲ್ಲಿ ಸೂಚಕ ಕಾರ್ಯವೊಂದರ ಕೇಳಿಕೆಯು ಯಾಕೆ ಅನುಚಿತವಾಗಿದೆ?
◆ ಪರಲೋಕದಿಂದ ಬಂದ ನಿಜವಾದ ರೊಟ್ಟಿ ತಾನು ಎಂದು ಯೇಸುವಿನ ಹೇಳಿಕೆಗೆ ಯೆಹೂದ್ಯರು ಯಾಕೆ ಗುಣುಗುಟ್ಟಿದರು?
◆ ಪರಲೋಕದಿಂದ ಬರುವ ರೊಟ್ಟಿಯ ಕುರಿತಾದ ಚರ್ಚೆಯು ಎಲ್ಲಿ ನಡೆಯಿತು? (w87 10/1)