54 ಅಪೊಸ್ತಲ ಯೋಹಾನ
ದಾರಿ ಕಾಣದೇ ಇರುವಾಗ್ಲೂ ಧೈರ್ಯ ತೋರಿಸಿದ
ವಯಸ್ಸಾದ ಅಪೊಸ್ತಲ ಯೋಹಾನ, “ಸಮಯ ತುಂಬ ಕಮ್ಮಿ ಇದೆ” ಅಂತ ಬರೆದ. ಹತ್ತಾರು ವರ್ಷಗಳ ಹಿಂದೆನೇ ಯೇಸು ಮತ್ತು ಪೌಲ, ಸಭೆಯಲ್ಲಿ ಸುಳ್ಳು ಬೋಧಕರು ಬಂದು ಸುಳ್ಳನ್ನ ಹಬ್ಬಿಸ್ತಾರೆ ಅಂತ ಎಚ್ಚರಿಸಿದ್ರು. ಇದ್ರಿಂದ ಸಭೆಯಲ್ಲಿ ಇರೋ ಎಷ್ಟೋ ಜನ ಸುಳ್ಳು ಬೋಧನೆಗಳನ್ನ ನಂಬಿ ಯೆಹೋವನನ್ನ ಸರಿಯಾದ ರೀತಿಲಿ ಆರಾಧಿಸೋದನ್ನ ಬಿಟ್ಟುಬಿಡ್ತಾರೆ ಅಂತ ಯೋಹಾನನಿಗೆ ಗೊತ್ತಿತ್ತು. ಈ ಸುಳ್ಳು ಬೋಧನೆಗಳು ಸಭೆಯಲ್ಲಿ ಹರಡೋಕೆ ಶುರುವಾದಾಗ ಯೋಹಾನ ಮತ್ತು ಬೇರೆ ಅಪೊಸ್ತಲರು ಸಭೆಯನ್ನ ಅದ್ರಿಂದ ಕಾಪಾಡಿದ್ರು. (ಮತ್ತಾ. 7:15; ಅ. ಕಾ. 20:29, 30; 2 ಥೆಸ. 2:6, 7) ಆದ್ರೆ ಈಗ ಬೇರೆ ಎಲ್ಲ ಅಪೊಸ್ತಲರು ತೀರಿಹೋಗಿದ್ದಾರೆ. ಯೋಹಾನ ಒಬ್ಬನೇ ಉಳ್ಕೊಂಡಿದ್ದಾನೆ. ಅದಕ್ಕೆ ಅವನು “ಸಮಯ ತುಂಬ ಕಮ್ಮಿ ಇದೆ” ಅಂತ ಬರೆದ. ಸುಳ್ಳು ಬೋಧನೆಗಳು ಒಂದು ಸಭೆಯಿಂದ ಇನ್ನೊಂದು ಸಭೆಗೆ ಬೇಗ ಹರಡ್ತಿರೋದನ್ನ ಅವನು ನೋಡಿದ. ಆಗ ಅವನಿಗೆ ಸಭೆಗಳೆಲ್ಲ ಮುಂದೆ ಏನಾಗುತ್ತೋ, ನಿಜ ಕ್ರೈಸ್ತರೇ ಇರಲ್ವೇನೋ ಅಂತೆಲ್ಲ ಅನಿಸಿರಬಹುದು. ಆದ್ರೂ ಅವನು ಭಯಪಡ್ಲಿಲ್ಲ, ಧೈರ್ಯ ತೋರಿಸಿದ.
ವಯಸ್ಸಾದ ಅಪೊಸ್ತಲ ಯೋಹಾನ ಹಿಂಸೆನ, ಬಂಧಿವಾಸನ ಮತ್ತು ಧರ್ಮಭ್ರಷ್ಟತೆಯನ್ನ ಹೇಗೆ ಎದುರಿಸಿದ?
ಯೋಹಾನನಿಗೆ 90ಕ್ಕಿಂತ ಜಾಸ್ತಿ ವಯಸ್ಸಾಗಿತ್ತು, ಆದ್ರೂ ‘ದೇವರ ಬಗ್ಗೆ ಮಾತಾಡ್ತಿದ್ದ ಮತ್ತು ಯೇಸು ಬಗ್ಗೆ ಸತ್ಯ ಹೇಳ್ತಿದ್ದ.’ ಅದಕ್ಕೇ ಅವನನ್ನ ಕೈದಿಯಾಗಿ ಪತ್ಮೋಸ್ ದ್ವೀಪಕ್ಕೆ ಕಳಿಸಿದ್ರು. ಅದು ಬರಡು ಪ್ರದೇಶ ಆಗಿತ್ತು, ಬಂಡೆಗಳಿಂದ ಕೂಡಿತ್ತು. ಇಂಥ ಸಮಯದಲ್ಲೂ, ನಿರೀಕ್ಷೆ ಕಳ್ಕೊಳ್ಳದೇ ಧೈರ್ಯವಾಗಿರೋಕೆ ಯೋಹಾನನಿಗೆ ಯಾವುದು ಸಹಾಯ ಮಾಡ್ತು? ಯೇಸು ತನ್ನೆಲ್ಲ ಶಿಷ್ಯರಿಗೆ, “ಈ ಲೋಕದ ಅಂತ್ಯಕಾಲ ಮುಗಿಯೋವರೆಗೂ ಯಾವಾಗ್ಲೂ ನಾನು ನಿಮ್ಮ ಜೊತೆ ಇರ್ತೀನಿ” ಅಂತ ಮಾತು ಕೊಟ್ಟಿದ್ದನು. (ಮತ್ತಾ. 28:20) ಆ ಮಾತು ಯೋಹಾನನಿಗೆ ಖಂಡಿತ ಧೈರ್ಯ ಕೊಟ್ಟಿರುತ್ತೆ!
ಯೇಸು ಆ ಮಾತು ಕೊಟ್ಟು 60ಕ್ಕಿಂತ ಜಾಸ್ತಿ ವರ್ಷ ಕಳೆದಿತ್ತು. ಆಗ ಯೇಸು ಒಂದು ಅದ್ಭುತವಾದ ರೀತಿಲಿ ಯೋಹಾನನಿಗೆ ಕಾಣಿಸ್ಕೊಂಡನು. ಯೇಸುನ ನೋಡಿದಾಗ, ಆತನ ಮಾತನ್ನ ಕೇಳಿಸ್ಕೊಂಡಾಗ ಯೋಹಾನನಿಗೆ ಎಷ್ಟು ಖುಷಿ ಆಗಿರಬೇಕಲ್ವಾ! ಯೇಸು ಯೋಹಾನನಿಗೆ ಮುಂದೆ ಏನಾಗುತ್ತೆ ಅಂತ ಒಂದು ಅದ್ಭುತವಾದ ದರ್ಶನ ತೋರಿಸಿದನು. ಆ ದರ್ಶನದಲ್ಲಿ, ‘ಒಡೆಯನ ದಿನದಲ್ಲಿ’ ಎಲ್ಲ ಸಭೆಗಳಲ್ಲಿರೋ ದೇವಜನ್ರು ಯೆಹೋವನನ್ನ ಮತ್ತೆ ಸರಿಯಾಗಿ ಆರಾಧಿಸ್ತಾರೆ. ಆಗ ಅವ್ರಿಗೆ ದೊಡ್ಡದೊಡ್ಡ ಕಷ್ಟ-ಪರೀಕ್ಷೆಗಳು ಬರುತ್ತೆ, ಅದನ್ನ ತಾಳ್ಕೊಳ್ಳೋಕೆ ಯೇಸು ಅವ್ರಿಗೆ ಸಹಾಯ ಮಾಡ್ತಾನೆ ಅಂತೆಲ್ಲ ಇತ್ತು.
ಆ ದರ್ಶನನ ಅವನಿಗೆ “ಕನಸಿನ ರೂಪದಲ್ಲಿ” ತೋರಿಸಲಾಯಿತು. ಅದಕ್ಕೆ ಸಾಂಕೇತಿಕ ಅರ್ಥ ಇತ್ತು. ಅದ್ರಿಂದ ದರ್ಶನದಲ್ಲಿ ನೋಡಿದ ಎಲ್ಲ ವಿಷ್ಯಗಳು ಅವನಿಗೆ ಪೂರ್ತಿಯಾಗಿ ಅರ್ಥ ಆಗ್ಲಿಲ್ಲ. ಆದ್ರೆ ಕೆಲವು ವಿಷ್ಯಗಳಂತೂ ಚೆನ್ನಾಗಿ ಅರ್ಥ ಆಯ್ತು. ಅದೇನಂದ್ರೆ ಯೆಹೋವ ಮತ್ತು ಯೇಸು ಈಗಿರೋ ಧರ್ಮಭ್ರಷ್ಟತೆನ ಹೀಗೇ ಮುಂದುವರಿಯೋಕೆ ಬಿಟ್ಟುಬಿಡಲ್ಲ. ಒಡೆಯನ ದಿನದಲ್ಲಿ ದೇವಜನ್ರ ಸಂಖ್ಯೆ ಜಾಸ್ತಿಯಾಗುತ್ತೆ, ಅವ್ರಿಗೆ ಯೆಹೋವ ದೇವರು ಅದ್ಭುತವಾದ ಆಶೀರ್ವಾದಗಳನ್ನ ಕೊಡ್ತಾನೆ. ಸ್ವರ್ಗದಲ್ಲಿ ನಡೆಯೋ ಒಂದು ಯುದ್ಧದಲ್ಲಿ ಸೈತಾನ ಸೋತೋಗ್ತಾನೆ, ಆಮೇಲೆ ಅವನನ್ನ ಭೂಮಿಗೆ ತಳ್ಳಿಬಿಡ್ತಾರೆ. ಕೊನೆಗೆ ಸೈತಾನ ಸರ್ವನಾಶ ಆಗ್ತಾನೆ. ಈ ದರ್ಶನ ಅವನಿಗೆ ಖಂಡಿತ ಧೈರ್ಯ ಕೊಟ್ಟಿರುತ್ತೆ. ಆಮೇಲೆ ಅವನು ದರ್ಶನದಲ್ಲಿ “ನೋಡಿದ ಎಲ್ಲಾ ವಿಷ್ಯಗಳನ್ನ” ಹಾಗೇ ಬರೆದಿಟ್ಟ.
ಪತ್ಮೋಸ್ ದ್ವೀಪದಲ್ಲಿ ಬಂಧಿಯಾಗಿದ್ದ ಯೋಹಾನನ ಜೀವನ ಕಷ್ಟಕರವಾಗಿತ್ತು. ಆದ್ರೂ ಅವನು ತನ್ನ ಖುಷಿನ, ಹುರುಪನ್ನ ಕಳ್ಕೊಳ್ಳಲಿಲ್ಲ. ಕ್ರೈಸ್ತರ ಕಡು ವೈರಿಯಾಗಿದ್ದ ರೋಮನ್ ಚಕ್ರವರ್ತಿ ಡೊಮಿಶನ್ ಬಹುಶಃ ಸತ್ತೋದ್ಮೇಲೆ ಯೋಹಾನನಿಗೆ ಬಿಡುಗಡೆ ಆಯ್ತು. ಆಮೇಲೆ ಅವನು ಎಫೆಸಕ್ಕೆ ವಾಪಸ್ ಬಂದ ಅನಿಸುತ್ತೆ. ಯೋಹಾನನಿಗೆ ಸುಮಾರು 100 ವರ್ಷ ಆದಾಗ ಯೆಹೋವ ದೇವರು ಅವನಿಗೆ ಒಂದು ದೊಡ್ಡ ನೇಮಕ ಕೊಟ್ಟನು. ಇದನ್ನ ಮಾಡೋದು ಅಷ್ಟು ಸುಲಭ ಆಗಿರಲಿಲ್ಲ.
ಯೋಹಾನ ನಾಲ್ಕನೇ ಮತ್ತು ಕೊನೆಯ ಸುವಾರ್ತಾ ಪುಸ್ತಕನ ಬರೆಯೋಕೆ ದೇವರು ಅವನನ್ನ ಪ್ರೇರಿಸಿದನು. ತಾನು ಈ ಪುಸ್ತಕ ಬರೆದ್ರೆ ಅದ್ರಲ್ಲಿರೋ ವಿಷ್ಯ ಸಭೆಯಿಂದ ಸಭೆಗೆ ಬೇಗ ಹರಡಿ ಅದ್ರಿಂದ ಕ್ರೈಸ್ತರ ನಂಬಿಕೆ ಮತ್ತು ಧೈರ್ಯ ಹೆಚ್ಚಾಗುತ್ತೆ ಅಂತ ಅವನಿಗೆ ಗೊತ್ತಿತ್ತು. ಆದ್ರೆ ವಿರೋಧಿಗಳ ದ್ವೇಷನೂ ಗ್ಯಾರಂಟಿ ಜಾಸ್ತಿ ಆಗ್ತಿತ್ತು. ಹಾಗಿದ್ರೂ ಅವನು ಭಯಪಟ್ಟು ಹಿಂದೇಟು ಹಾಕ್ಲಿಲ್ಲ.
ಯೇಸು ತೀರಿಹೋಗಿ ಈಗಾಗ್ಲೇ ಸುಮಾರು 70 ವರ್ಷ ಕಳೆದಿತ್ತು. ಆದ್ರೂ ಯೇಸು ಹೇಳಿದ ಮತ್ತು ಮಾಡಿದ ವಿಷ್ಯಗಳು ಪವಿತ್ರಶಕ್ತಿಯ ಸಹಾಯದಿಂದ ಯೋಹಾನನ ಮನಸ್ಸಲ್ಲಿ ಅಚ್ಚಳಿಯದೆ ಹಾಗೇ ಉಳಿದಿತ್ತು. ಇದ್ರಿಂದ ಅವನು ಯೇಸುವಿನ ಜೀವನದಲ್ಲಿ ನಡೆದ ಎಷ್ಟೋ ಮನಮುಟ್ಟೋ ಘಟನೆಗಳನ್ನ ಬರೆದ. ಅವನು ಬರೆದ 90 ಪ್ರತಿಶತ ವಿಷ್ಯಗಳು ಇದಕ್ಕೆ ಮುಂಚೆ ಬರೆದ ಮೂರು ಸುವಾರ್ತಾ ಪುಸ್ತಕಗಳಲ್ಲಿ ಇಲ್ಲ. ಉದಾಹರಣೆಗೆ ಯೇಸು ಲಾಜರನಿಗೆ ಮತ್ತೆ ಜೀವ ಕೊಟ್ಟಿದ್ದು, ಆಮೇಲೆ ಧರ್ಮ ಗುರುಗಳು ಲಾಜರನನ್ನ ಕೊಲ್ಲೋಕೆ ಸಂಚು ಮಾಡಿದ್ದು. (ಯೋಹಾ. 11:1-46; 12:10) ಅಷ್ಟೇ ಅಲ್ಲ, ಯೇಸು ತಾನು ಸಾಯೋ ಹಿಂದಿನ ರಾತ್ರಿ ಶಿಷ್ಯರ ಜೊತೆ ಆಡಿದ ಮಾತುಗಳನ್ನ ಮತ್ತು ಅವ್ರಿಗೋಸ್ಕರ ಮಾಡಿದ ಮನಮುಟ್ಟೋ ಪ್ರಾರ್ಥನೆಯನ್ನ ಯೋಹಾನ ವಿವರವಾಗಿ ಬರೆದಿದ್ದಾನೆ. ಅವನು ಬರೆದ ಈ ವಿಷ್ಯಗಳು ಇವತ್ತಿಗೂ ಎಷ್ಟೋ ಕ್ರೈಸ್ತರಿಗೆ ಪ್ರೋತ್ಸಾಹ ಕೊಡ್ತಿದೆ. ಅವನು ಇದನ್ನೆಲ್ಲ ಬರೆದಿದ್ದು ಎಷ್ಟು ಒಳ್ಳೆದಾಯ್ತಲ್ವಾ!
ಹೆಚ್ಚುಕಮ್ಮಿ ಅದೇ ಸಮಯದಲ್ಲೇ ಯೋಹಾನ ತನ್ನ ಜೊತೆ ಕ್ರೈಸ್ತರಿಗೆ ದೇವರ ಪ್ರೇರಣೆಯಿಂದ ಇನ್ನೂ ಮೂರು ಪತ್ರಗಳನ್ನ ಬರೆದ. ಆ ಪತ್ರಗಳಲ್ಲಿ ಅವನು, ಆ ಕಾಲದಲ್ಲಿ ಹರಡ್ತಿದ್ದ ಧರ್ಮಭ್ರಷ್ಟತೆನ ಧೈರ್ಯವಾಗಿ ಬಯಲಿಗೆಳೆದ. ಯಾವತ್ತೂ ಧರ್ಮಭ್ರಷ್ಟರ ಜೊತೆ ಸಹವಾಸ ಮಾಡಬೇಡಿ, ಅವ್ರಿಗೆ ನಮಸ್ಕಾರನೂ ಹೇಳಬೇಡಿ ಅಂತ ಕ್ರೈಸ್ತರನ್ನ ಎಚ್ಚರಿಸಿದ. ಯೋಹಾನನ ಮೂರೂ ಪತ್ರಗಳಲ್ಲಿ ಪ್ರೀತಿ ಮತ್ತು ನಿರೀಕ್ಷೆ ಎದ್ದು ಕಾಣ್ತಿತ್ತು. ಅವನು “ದೇವರು ಪ್ರೀತಿಯಾಗಿದ್ದಾನೆ” ಅಂತ ಕಲಿಸಿದ. ತಾನು ಕೊಟ್ಟ ಪ್ರೋತ್ಸಾಹ ಮತ್ತು ಬುದ್ಧಿಮಾತಲ್ಲಿ ಅದೇ ಪ್ರೀತಿನ ತೋರಿಸಿದ. ಅವನು ಯಾರಿಗೆ ಸತ್ಯ ಕಲಿಸಿದ್ನೋ ಅವ್ರನ್ನ “ನನ್ನ ಮಕ್ಕಳು” ಅಂತ ಕರೆದ. ಅವರು ‘ಸತ್ಯಕ್ಕೆ ತಕ್ಕ ಹಾಗೆ ಜೀವನ ಮಾಡ್ತಿರೋದನ್ನ’ ನೋಡಿದಾಗ ಅವನಿಗೆ ಎಷ್ಟು ಖುಷಿ ಆಯ್ತು ಅಂತನೂ ಬರೆದ. ಅವನ ಈ ಮಾತುಗಳು ಅವರು ಮಾಡ್ತಿದ್ದ ಒಳ್ಳೇ ಕೆಲ್ಸನ ಮುಂದುವರೆಸೋಕೆ ಖಂಡಿತ ಅವ್ರಿಗೆ ಪ್ರೋತ್ಸಾಹ ಕೊಟ್ಟಿರುತ್ತೆ!
ಯೋಹಾನ ತೀರಿಹೋದ್ಮೇಲೆ ಧರ್ಮಭ್ರಷ್ಟತೆ ಎಲ್ಲಾ ಸಭೆಯಲ್ಲಿ ತುಂಬಿಹೋಯ್ತು. ಅವನ ಕಾಲದಲ್ಲಿದ್ದಷ್ಟು ಧರ್ಮಭ್ರಷ್ಟತೆ ನಮ್ಮ ಕಾಲದಲ್ಲೂ ಹರಡಿ ಬಿಡುತ್ತಾ ಅಂತ ನಾವು ಚಿಂತೆ ಮಾಡಬೇಕಾಗಿಲ್ಲ. ಯಾಕಂದ್ರೆ ‘ಆ ತರ ಮತ್ತೆ ಆಗೋಕೆ ನಾನು ಬಿಡಲ್ಲ’ ಅಂತ ಯೆಹೋವನೇ ಮಾತು ಕೊಟ್ಟಿದ್ದಾನೆ. (ಯೆಶಾ. 54:17; ಅ. ಕಾ. 3:21) ಹಾಗಿದ್ರೂ ಯೋಹಾನನ ತರ ನಮಗೂ ಕಷ್ಟ-ಹಿಂಸೆ ಬರಬಹುದು, ನಮ್ಮನ್ನ ಜೈಲಿಗೂ ಹಾಕಬಹುದು. ನಾವೆಲ್ರೂ ಯೋಹಾನನ ತರ ಇರೋಣ. ಜೀವನದಲ್ಲಿ ಅದೇನೇ ಆದ್ರೂ ಧೈರ್ಯ ತೋರಿಸೋಣ, ದೇವರನ್ನ ಮೆಚ್ಚಿಸೋಣ!
ಈ ಘಟನೆ ಬಗ್ಗೆ ಬೈಬಲಲ್ಲಿ ಓದಿ:
ಉತ್ರ ಹುಡುಕಿ:
ಯೋಹಾನ ಹೇಗೆಲ್ಲಾ ಧೈರ್ಯ ತೋರಿಸಿದ?
ಇನ್ನೂ ಜಾಸ್ತಿ ತಿಳ್ಕೊಳ್ಳಿ
1. ಈ ಹಿಂದೆ ಯೋಹಾನನಲ್ಲಿ ಎಂಥ ಸ್ವಭಾವ ಇತ್ತು? (bt ಪುಟ 33ರ ಚೌಕ ಪ್ಯಾರ 3-4)
2. ಜನ ಯೋಹಾನನನ್ನ ‘ಅಷ್ಟೇನು ಓದಿಲ್ಲದ ಸಾಮಾನ್ಯ ವ್ಯಕ್ತಿ’ ಅಂತ ಯಾಕೆ ಕರೆದ್ರು? (ಅ. ಕಾ. 4:13; w08 5/15 ಪುಟ 30 ಪ್ಯಾರ 6)
3. ಯೋಹಾನ ಯಾವ ಅರ್ಥದಲ್ಲಿ ಯೇಸು ಬರೋ ತನಕ ಇದ್ದ? (ಯೋಹಾ. 21:22ರ ಸ್ಟಡಿ ನೋಟ್, nwtsty-wcgr)
4. ಯೋಹಾನನ ಹೆಸ್ರಲ್ಲಿರೋ ಸುವಾರ್ತಾ ಪುಸ್ತಕನ ಯೋಹಾನನೇ ಬರೆದಿದ್ದು ಅಂತ ನಾವು ಯಾಕೆ ಹೇಳಬಹುದು? (it “ಯೋಹಾನ ಬರೆದ ಸಿಹಿಸುದ್ದಿ” ಪ್ಯಾರ 2-8-wcgr) ಎ
Fondation Martin Bodmer, Cologny (Genève)
ಚಿತ್ರ ಎ: ಸುಮಾರು ಕ್ರಿಸ್ತ ಶಕ 200ರ ಹಸ್ತಪ್ರತಿ, ಅದ್ರಲ್ಲಿ “ಯೋಹಾನ ಬರೆದ ಸಿಹಿಸುದ್ದಿ” ಅಂತ ಬರೆದಿರೋದನ್ನ ತೋರಿಸಲಾಗಿದೆ
ನಮಗೇನು ಪಾಠ?
ಯೋಹಾನ ತನ್ನ ಪುಸ್ತಕಗಳಲ್ಲಿ 100ಕ್ಕಿಂತ ಜಾಸ್ತಿ ಸಲ ಯೇಸು ತನ್ನ ಪ್ರಾಣ ತ್ಯಾಗ ಮಾಡಿದ್ರ ಬಗ್ಗೆ ಅಥವಾ ಅದ್ರಿಂದ ಸಿಗೋ ಪ್ರಯೋಜನಗಳ ಬಗ್ಗೆ ಬರೆದಿದ್ದಾನೆ. ನಾವು ಯೋಹಾನನ ತರ ಯೇಸು ಮಾಡಿದ ತ್ಯಾಗಕ್ಕೆ ಋಣಿಗಳಾಗಿದ್ದೀವಿ ಅಂತ ಹೇಗೆ ತೋರಿಸಬಹುದು?
ಯೋಹಾನನಿಗೆ ಸುಮಾರು 100 ವರ್ಷ ಆದಾಗ ಐದು ಪುಸ್ತಕಗಳನ್ನ ಬರೆಯೋಕೆ ಯೆಹೋವ ಅವನನ್ನ ಪ್ರೇರಿಸಿದನು. ಇದ್ರಿಂದ ಯೆಹೋವ ದೇವರು ವಯಸ್ಸಾದವ್ರನ್ನ ಹೇಗೆ ನೋಡ್ತಾನೆ ಅಂತ ಗೊತ್ತಾಗುತ್ತೆ? ಬಿ
ಚಿತ್ರ ಬಿ
ಯೋಹಾನನ ತರ ನೀವು ಹೇಗೆಲ್ಲಾ ಧೈರ್ಯ ತೋರಿಸಬೇಕಂತ ಇದ್ದೀರಾ?
ಇದ್ರ ಬಗ್ಗೆ ಯೋಚ್ನೆ ಮಾಡಿ
ಈ ಘಟನೆ ಯೆಹೋವನ ಬಗ್ಗೆ ನಂಗೇನು ಕಲಿಸುತ್ತೆ?
ಈ ಘಟನೆಗೂ ಯೆಹೋವನ ಉದ್ದೇಶಕ್ಕೂ ಏನ್ ಸಂಬಂಧ?
ಯೋಹಾನನಿಗೆ ಕ್ರಿಸ್ತನ ಜೊತೆ ಸ್ವರ್ಗದಲ್ಲಿ ಆಳ್ವಿಕೆ ಮಾಡೋಕೆ ಅವಕಾಶ ಸಿಕ್ತು ಅನ್ನೋ ವಿಷ್ಯ ಯಾಕೆ ನಿಮಗೆ ಖುಷಿ ಕೊಡುತ್ತೆ?
ಇದನ್ನೂ ನೋಡಿ
ವಯಸ್ಸಾದ ಸಹೋದರ ಸಹೋದರಿಯರು ಯೋಹಾನನ ತರ ಧೈರ್ಯ ತೋರಿಸೋಕೆ ಆಗುತ್ತಾ?
ಯೋಹಾನ ಪ್ರೀತಿ ಬಗ್ಗೆ ತುಂಬ ವಿಷ್ಯಗಳನ್ನ ಬರೆದ. ಅದ್ರಿಂದ ಮತ್ತು ಅವನ ಉದಾಹರಣೆಯಿಂದ ನಾವೇನು ಕಲಿಬಹುದು?