ನಿಮಗೆ ಗೊತ್ತಿತ್ತಾ?
ಯಜ್ಞವೇದಿ ಮೇಲೆ ಬಲಿ ಕೊಟ್ಟ ನಂತ್ರ ಪ್ರಾಣಿಗಳ ರಕ್ತವನ್ನ ಒಂದನೇ ಶತಮಾನದಲ್ಲಿದ್ದ ಪುರೋಹಿತರು ಏನು ಮಾಡ್ತಿದ್ರು?
ಹಿಂದೆ ಇಸ್ರಾಯೇಲಿನಲ್ಲಿ ಸಾವಿರಾರು ಪ್ರಾಣಿಗಳನ್ನ ದೇವಾಲಯದ ಯಜ್ಞವೇದಿ ಮೇಲೆ ಪುರೋಹಿತರು ಪ್ರತಿ ವರ್ಷ ಬಲಿ ಕೊಡ್ತಿದ್ರು. ಪಸ್ಕ ಹಬ್ಬದಲ್ಲಂತೂ ಸುಮಾರು 2,50,000 ಕುರಿಮರಿಗಳನ್ನ ಬಲಿಯಾಗಿ ಕೊಡ್ತಿದ್ರು. ಹಾಗಾಗಿ ಯಜ್ಞವೇದಿ ಮೇಲೆ ತುಂಬ ರಕ್ತ ಹರಿತಿತ್ತು ಅಂತ ಒಂದನೇ ಶತಮಾನದ ಯೆಹೂದಿ ಇತಿಹಾಸಕಾರ ಜೋಸೀಫಸ್ ಹೇಳಿದ್ದಾರೆ. (ಯಾಜ. 1:10, 11; ಅರ. 28:16, 19) ಇಷ್ಟಕ್ಕೂ ಅಷ್ಟೊಂದು ರಕ್ತ ಎಲ್ಲಿ ಹೋಗ್ತಿತ್ತು?
ಹೆರೋದ ಕಟ್ಟಿದ್ದ ದೇವಾಲಯದ ಸುತ್ತಲೂ ವಿಜ್ಞಾನಿಗಳು ಅಗೆದು ನೋಡಿದ್ದಾರೆ. ಆಗ ಅವ್ರಿಗೆ ಅಲ್ಲಿ, ದೇವಾಲಯದಿಂದ ರಕ್ತ ಹರಿದು ಹೋಗೋಕೆ ಇದ್ದ ವ್ಯವಸ್ಥೆ ಬಗ್ಗೆ ಗೊತ್ತಾಗಿದೆ. ಈ ವ್ಯವಸ್ಥೆನ ಕ್ರಿಸ್ತ ಶಕ 70ರಲ್ಲಿ ದೇವಾಲಯ ನಾಶ ಆಗೋವರೆಗೂ ಬಳಸ್ತಿದ್ರು ಅಂತ ಕಾಣುತ್ತೆ.
ಈ ವ್ಯವಸ್ಥೆಯಲ್ಲಿದ್ದ ಎರಡು ವಿಶೇಷತೆಗಳು ಯಜ್ಞವೇದಿನ ಹೇಗೆ ಶುದ್ಧವಾಗಿಡ್ತಿತ್ತು ಅಂತ ನೋಡೋಣ.
ಯಜ್ಞವೇದಿಯ ಕೆಳಗಿದ್ದ ಒಂದು ರಂಧ್ರ: ಯಜ್ಞವೇದಿಯನ್ನ ಶುಚಿಯಾಗಿಡೋಕೆ ಇದ್ದ ವ್ಯವಸ್ಥೆ ಬಗ್ಗೆ ಒಂದು ವಿವರಣೆ ಮೂರನೇ ಶತಮಾನದಲ್ಲಿ ಬರೆದ ಮಿಶ್ನಾ ಪುಸ್ತಕದಲೇಲ್ದೆ. ಈ ಪುಸ್ತಕದಲ್ಲಿ ಯೆಹೂದಿ ನಿಯಮ ಮತ್ತು ಸಂಪ್ರಾದಯಗಳ ಬಗ್ಗೆ ಮಾಹಿತಿ ಇದೆ. ಅದು ಹೀಗೆ ಹೇಳುತ್ತೆ: “ಯಜ್ಞವೇದಿಯ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಮಧ್ಯ ಭಾಗದಲ್ಲಿ ಎರಡು ರಂಧ್ರಗಳಿತ್ತು . . . ಈ ರಂಧ್ರಗಳಿಂದ ರಕ್ತ ಮತ್ತು ನೀರು ಹರಿದು ಕಿದ್ರೋನ್ ಕಣಿವೆ ಕಡೆಗೆ ಹೋಗ್ತಿತ್ತು.”
ಯಜ್ಞವೇದಿಯಲ್ಲಿನ “ರಂಧ್ರಗಳು” ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿತ್ತು ಅಂತ ಆಧುನಿಕ ವಿಜ್ಞಾನಿಗಳು ಒಪ್ಕೊಂಡಿದ್ದಾರೆ. ದಿ ಕೇಂಬ್ರಿಡ್ಜ್ ಹಿಸ್ಟರಿ ಆಫ್ ಜುಡಾಯಿಸಮ್ ಸಹ “ದೇವಾಲಯದಲ್ಲಿ ನೀರು ಹರಿದು ಹೋಗೋಕೆ ಒಂದು ದೊಡ್ಡ ವ್ಯವಸ್ಥೆ ಇತ್ತು. ಈ ವ್ಯವಸ್ಥೆ ಯಜ್ಞವೇದಿಯಿಂದ ರಕ್ತ ಮತ್ತು ನೀರು ಹರಿದು ಹೋಗೋಕೆ ಸಹಾಯ ಮಾಡ್ತಿತ್ತು” ಅಂತ ಖಚಿತಪಡಿಸಿದೆ.
ಸಾಕಷ್ಟು ನೀರಿನ ವ್ಯವಸ್ಥೆ: ಯಜ್ಞವೇದಿಯ ಕೆಳ ಭಾಗನ ಮತ್ತು ರಕ್ತ ಹರಿದು ಹೋಗೋ ಜಾಗನ ಶುಚಿಯಾಗಿಡಲು ಪುರೋಹಿತರಿಗೆ ಸಾಕಷ್ಟು ನೀರು ಬೇಕಾಗ್ತಿತ್ತು. ಆದ್ರಿಂದ ಪುರೋಹಿತರು ದೇವಾಲಯಕ್ಕೆ ಪಟ್ಟಣದಿಂದ ನೀರನ್ನ ತರಿಸ್ತಿದ್ರು. ಈ ತರ ನೀರನ್ನ ತರಿಸೋಕೆ ಅವರು ಕಾಲುವೆಗಳನ್ನ, ಕೊಳಗಳನ್ನ ಮತ್ತು ತೊಟ್ಟಿಗಳನ್ನ ಬಳಸ್ತಿದ್ರು. ಪುರಾತನಶಾಸ್ತ್ರಜ್ಞ ಜೋಸೆಫ್ ಪ್ಯಾಟ್ರಿಕ್ ಹೀಗೆ ಹೇಳ್ತಾರೆ: “ಪ್ರಾಣಿಗಳ ರಕ್ತ ಮತ್ತು ದೇವಾಲಯವನ್ನ ಶುಚಿ ಮಾಡೋಕೆ ಬಳಸಿದ ನೀರು ಹರಿದು ಹೋಗೋ ತರ ಮಾಡೋಕೆ ಇಲ್ಲಿದ್ದ ವ್ಯವಸ್ಥೆ ನಿಜಕ್ಕೂ ಅದ್ಭುತ.”