ಪ್ರಶ್ನಾ ಚೌಕ
◼ ಸಭೆಗೆ ಸಹಾಯ ಮಾಡುವ ಉದ್ದೇಶದಿಂದ ಹಳೆಯ ಸಾಮಾನುಗಳ ಮಾರಾಟದಂಥ ಹಣಸಂಗ್ರಹ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಯೋಗ್ಯವೊ?
ಧಾರ್ಮಿಕ ಸಂಸ್ಥೆಗಳು ಹಣಸಂಗ್ರಹಕ್ಕಾಗಿ ಔತಣಗಳು, ಮಾರಾಟಗಳು ಅಥವಾ ಉತ್ಸವಗಳಂಥ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಾಮಾನ್ಯವಾಗಿವೆ. ಇವು ಹಣಕ್ಕಾಗಿ ಮನವಿಮಾಡುವ ವಿಧಗಳಾಗಿವೆ ಮತ್ತು ಒಂದು ಒಳ್ಳೆಯ ಉದ್ದೇಶವನ್ನು ಪೂರೈಸುತ್ತದೆಂದು ಅನೇಕರು ನೆನಸಬಹುದು. ಆದರೆ ಯೆಹೋವನ ಸಾಕ್ಷಿಗಳು ಹಣಕಾಸಿನ ಬೆಂಬಲಕ್ಕಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುವುದಿಲ್ಲ.
ಚರ್ಚುಗಳನ್ನಾಗಲಿ ಅಥವಾ ಅಲ್ಲಿನ ನಿಧಿ ಸಂಗ್ರಹಿಸುವ ವಿಧಗಳನ್ನಾಗಲಿ ನಾವು ಅನುಸರಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾ ಇಸವಿ 1879ರ ಆಗಸ್ಟ್ ವಾಚ್ ಟವರ್ ಪತ್ರಿಕೆಯ ಎರಡನೆಯ ಸಂಚಿಕೆಯು ತಿಳಿಸಿದ್ದು: “ಯೆಹೋವನೇ ‘ಝಯನ್ಸ್ ವಾಚ್ ಟವರ್’ನ ಬೆಂಬಲಿಗನು ಎಂದು ನಾವು ನಂಬುತ್ತೇವೆ. ಆದುದರಿಂದ ಅದು ಬೆಂಬಲಕ್ಕಾಗಿ ಮನುಷ್ಯರನ್ನು ಬೇಡುವುದೂ ಇಲ್ಲ ಭಿನ್ನಹಿಸುವುದೂ ಇಲ್ಲ. ‘ಬೆಟ್ಟಗಳಲ್ಲಿರುವ ಬೆಳ್ಳಿಬಂಗಾರಗಳೆಲ್ಲವೂ ನನ್ನದೆ’ ಎಂದು ಆತನು ಹೇಳುವಾಗ, ಅವಶ್ಯವಿರುವ ನಿಧಿಯನ್ನು ಆತನು ಕೊಡದಿದ್ದಲ್ಲಿ ಈ ಪ್ರಕಾಶನವನ್ನು ರದ್ದುಪಡಿಸುವ ಸಮಯ ಬಂದಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ.”
“ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂ. 9:7) ಈ ಶಾಸ್ತ್ರವಚನದಲ್ಲಿರುವ ಮೂಲತತ್ತ್ವವನ್ನು ಅನುಸರಿಸುವುದನ್ನು ನಾವು ಮುಂದುವರಿಸುತ್ತೇವೆ. ರಾಜ್ಯ ಸಭಾಗೃಹದಲ್ಲಿ ಕಾಣಿಕೆ ಪೆಟ್ಟಿಗೆಗಳು ಇಡಲ್ಪಟ್ಟಿವೆ. ಸ್ವಯಂಪ್ರೇರಿತ ದಾನಗಳನ್ನು ಕೊಡಲಿಚ್ಛಿಸುವ ವ್ಯಕ್ತಿಗಳು ಆ ಪೆಟ್ಟಿಗೆಯಲ್ಲಿ ಹಾಕಬಹುದು. (2 ಅರ. 12:9) ಕಾಣಿಕೆಗಳನ್ನು ಮನವಿಮಾಡಲಾಗುವುದಿಲ್ಲ. ಮಾತ್ರವಲ್ಲದೆ ದಾನಮಾಡುವವರು ಸಹ ಪ್ರತಿಯಾಗಿ ಯಾವುದೋ ಲಾಭಪಡೆದುಕೊಳ್ಳವ ಉದ್ದೇಶದಿಂದ ಅದನ್ನು ಕೊಡುವುದಿಲ್ಲ.