ದಶಾಜ್ಞೆಗಳು
ಇಂಗ್ಲೆಂಡಿನ ಗ್ಲಾಸ್ಟರ್ ಜಿಲ್ಲೆಯ ಬಿಷಪನು ಕಂಡುಹಿಡಿದದ್ದೇನೆಂದರೆ, ಅವನ ಆಡಳಿತ ಪ್ರಾಂತದಲ್ಲಿರುವ ಅರ್ಧಕ್ಕಿಂತಲೂ ಹೆಚ್ಚು ಮಂದಿ ವೈದಿಕರು, ದಶಾಜ್ಞೆಗಳನ್ನು ಪುನರಾವರ್ತಿಸಲು ಅಸಮರ್ಥರಾಗಿದ್ದರು, ಮತ್ತು ಅವರಲ್ಲಿ 10 ಪ್ರತಿಶತ ಮಂದಿಗೆ, ಅವುಗಳನ್ನು ಬೈಬಲಿನಲ್ಲಿ ಎಲ್ಲಿ ಕಂಡುಕೊಳ್ಳುವುದೆಂಬುದೂ ಗೊತ್ತಿರಲಿಲ್ಲ. ಆದರೆ ಅದು 450 ವರ್ಷಗಳ ಹಿಂದೆ ಆಗಿತ್ತು. ಅಂದಿನಿಂದ ಪರಿಸ್ಥಿತಿಯು ಉತ್ತಮಗೊಂಡಿದೆಯೊ? ಆ್ಯಂಗ್ಲಿಕನ್ ವೈದಿಕರ ಕುರಿತಾದ ಇತ್ತೀಚಿಗಿನ ಸಂಡೇ ಟೈಮ್ಸ್ ಅನಿಶ್ಚಿತ ಸಮೀಕ್ಷೆಯು ಪ್ರಕಟಪಡಿಸಿರುವಂತೆ, ಪರಿಸ್ಥಿತಿಯು ಉತ್ತಮಗೊಂಡೇ ಇಲ್ಲ.
ಸಂದರ್ಶನ ಮಾಡಲ್ಪಟ್ಟ 200 ಮಂದಿ ಪಾದ್ರಿಗಳಲ್ಲಿ, 34 ಪ್ರತಿಶತ ಮಂದಿ ಮಾತ್ರ ಎಲ್ಲ ದಶಾಜ್ಞೆಗಳನ್ನೂ ಉಲ್ಲೇಖಿಸಶಕ್ತರಾಗಿದ್ದರು. ಉಳಿದವರಲ್ಲಿ, ಒಬ್ಬನಿಗೆ ಅವು ತೀರ ನಕಾರಾತ್ಮಕವಾಗಿದ್ದವೆಂದೆನಿಸಿತ್ತು, ಮತ್ತು ಇನ್ನೊಬ್ಬನು, ಅವು ಆಧುನಿಕ ನೈತಿಕ ಪಂಥಾಹ್ವಾನಗಳಿಗೆ ಸುಸಂಬದ್ಧವಾಗಿಲ್ಲವೆಂದು ಅವುಗಳನ್ನು ವರ್ಜಿಸಿಬಿಟ್ಟನು.
ನಿಮಗೆ ದಶಾಜ್ಞೆಗಳು ಗೊತ್ತೊ ಅಥವಾ ಅವುಗಳನ್ನು ಎಲ್ಲಿ ಕಂಡುಕೊಳ್ಳುವುದೆಂಬುದು ಗೊತ್ತೊ? ಅವು ಬೈಬಲಿನ ಎರಡನೆಯ ಪುಸ್ತಕವಾದ ವಿಮೋಚನಕಾಂಡದಲ್ಲಿ, 20ನೆಯ ಅಧ್ಯಾಯದ ಮೊದಲ 17 ವಚನಗಳಲ್ಲಿ ದಾಖಲಿಸಲ್ಪಟ್ಟಿವೆ. ಅವುಗಳನ್ನು ಏಕೆ ಓದಬಾರದು? ಅವುಗಳನ್ನು ವರ್ಗೀಕರಿಸಲು ಒಂದು ಸರಳವಾದ ವಿಧಾನ ಇಲ್ಲಿದೆ. ಮೊದಲ ನಾಲ್ಕು ಆಜ್ಞೆಗಳು ದೇವರ ಕಡೆಗಿನ ನಮ್ಮ ಆರಾಧನೆಗೆ ಸಂಬಂಧಿಸಿದವುಗಳಾಗಿವೆ, ಐದನೆಯದು ಕುಟುಂಬ ಜೀವಿತಕ್ಕೆ ಪ್ರಮುಖತೆ ಕೊಡುತ್ತದೆ, ಆರರಿಂದ ಒಂಬತ್ತರ ವರೆಗಿನ ಆಜ್ಞೆಗಳು, ನಮ್ಮ ಜೊತೆಮಾನವರೊಂದಿಗಿನ ನಮ್ಮ ಸಂಬಂಧಕ್ಕೆ ಸಂಬಂಧಿಸಿದವುಗಳಾಗಿವೆ, ಮತ್ತು ಹತ್ತನೆಯ ಆಜ್ಞೆಯು ಅಸಾಮಾನ್ಯವಾದದ್ದಾಗಿದ್ದು, ನಾವು ನಮ್ಮ ಸ್ವಂತ ಹೃದಯಗಳನ್ನು ಪರೀಕ್ಷಿಸಿಕೊಳ್ಳುವಂತೆ, ನಮ್ಮ ಹೇತುಗಳನ್ನು ಪರಿಶೀಲಿಸಿಕೊಳ್ಳುವಂತೆ ಮಾಡುತ್ತದೆ. ಕ್ರೈಸ್ತರು ಈ ಮೂಲತತ್ವಗಳನ್ನು ಅನ್ವಯಿಸಿಕೊಳ್ಳಬಹುದಾದ ಸಂಕ್ಷಿಪ್ತ ಸಾರಾಂಶವು ಇಲ್ಲಿದೆ.
ಮೊದಲನೆಯದು: ನಮ್ಮ ಸೃಷ್ಟಿಕರ್ತನಿಗೆ ಸಂಪೂರ್ಣ ಭಕ್ತಿಯನ್ನು ತೋರಿಸಿರಿ. ಎರಡನೆಯದು: ಆರಾಧನೆಯಲ್ಲಿ ವಿಗ್ರಹಗಳನ್ನು ಉಪಯೋಗಿಸಬೇಡಿ. ಮೂರನೆಯದು: ಸರ್ವದಾ ದೇವರ ನಾಮಕ್ಕೆ ಗೌರವ ಕೊಡಿರಿ ಹಾಗೂ ಅದನ್ನು ಘನತೆಗೇರಿಸಿರಿ. ನಾಲ್ಕನೆಯದು: ಯಾವುದೇ ಅಪಕರ್ಷಣೆಯಿಲ್ಲದೆ ಆತ್ಮಿಕ ವಿಷಯಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಮಯವನ್ನು ಮಾಡಿಕೊಳ್ಳಿರಿ. ಐದನೆಯದು: ಮಕ್ಕಳೇ, ನಿಮ್ಮ ಹೆತ್ತವರಿಗೆ ಗೌರವ ತೋರಿಸಿರಿ. ಆರನೆಯದು: ಕೊಲೆಮಾಡಬೇಡಿ. ಏಳನೆಯದು: ವ್ಯಭಿಚಾರವನ್ನು ತೊರೆಯಿರಿ. ಎಂಟನೆಯದು: ಕದಿಯಬೇಡಿ. ಒಂಬತ್ತನೆಯದು: ಸತ್ಯವನ್ನೇ ಹೇಳಿರಿ. ಹತ್ತನೆಯದು: ಅತ್ಯಾಶೆಯನ್ನು ವರ್ಜಿಸಿರಿ.
ಈ ದಶಾಜ್ಞೆಗಳು, ಮೋಶೆಗೆ ಕೊಡಲ್ಪಟ್ಟಿದ್ದ ನಿಯಮಾವಳಿಯ ಭಾಗವಾಗಿದ್ದವು. ಆದರೆ ಅವುಗಳಲ್ಲಿ ಒಳಗೊಂಡಿರುವ ಮೂಲತತ್ವಗಳು ಅನಂತಕಾಲಿಕವಾಗಿವೆ. (ರೋಮಾಪುರ 6:14; ಕೊಲೊಸ್ಸೆ 2:13, 14) ಈ ಕಾರಣದಿಂದ, ಯೇಸುವಿನ ಹಿಂಬಾಲಕರು ದಶಾಜ್ಞೆಗಳಿಂದ ಉದ್ಧರಿಸಿದರು ಮತ್ತು ಅವುಗಳಿಗೆ ನಿರ್ದೇಶಿಸಿದರು. (ರೋಮಾಪುರ 13:8-10) ಇಂದು ಎಲ್ಲರೂ ದೈವಿಕವಾಗಿ ಪ್ರೇರಿತವಾದ ಈ ಮೂಲತತ್ವಗಳನ್ನು ಗೌರವಿಸಿ, ಅವುಗಳಿಗನುಸಾರ ಜೀವಿಸಿರುತ್ತಿದ್ದಲ್ಲಿ, ಜೀವಿತವು ಎಷ್ಟು ಅತ್ಯಧಿಕವಾಗಿ ಸಂತೋಷಭರಿತವೂ ಸುರಕ್ಷಿತವಾದದ್ದೂ ಆಗಿರುತ್ತಿತ್ತು!