ವಾಚಕರಿಂದ ಪ್ರಶ್ನೆಗಳು
ವಾರ್ತಾ ವರದಿಗಳಿಗನುಸಾರ, ಒಂದು ಮಗು ಹುಟ್ಟಿದ ಬಳಿಕ, ಗರ್ಭವೇಷ್ಟನ ಮತ್ತು ಹೊಕ್ಕಳಬಳ್ಳಿಗಳಲ್ಲಿರುವ ರಕ್ತದಿಂದ ಪದಾರ್ಥಗಳನ್ನು ತೆಗೆಯಲಿಕ್ಕಾಗಿ, ಕೆಲವು ಆಸ್ಪತ್ರೆಗಳು ಅವುಗಳನ್ನು ಉಳಿಸಿಕೊಳ್ಳುತ್ತವೆ. ಇದು ಕ್ರೈಸ್ತರನ್ನು ಚಿಂತೆಗೊಳಪಡಿಸಬೇಕೊ?
ಅನೇಕ ಸ್ಥಳಗಳಲ್ಲಿ, ಈ ಮೇಲಿನಂತಹವುಗಳು ನಡೆಯುವುದೇ ಇಲ್ಲವಾದುದರಿಂದ, ಕ್ರೈಸ್ತರು ಚಿಂತೆಗೊಳಪಡುವ ಅಗತ್ಯವಿರುವುದಿಲ್ಲ. ಆದರೆ ಒಬ್ಬ ಕ್ರೈಸ್ತಳು ಹೆರುವ ಆಸ್ಪತ್ರೆಯಲ್ಲಿ ಇಂತಹ ಅಭ್ಯಾಸವಿದೆಯೆಂದು ನಂಬಲು ಅತಿಯಾದ ಸಕಾರಣವಿರುವಲ್ಲಿ, ಗರ್ಭವೇಷ್ಟನ ಮತ್ತು ಹೊಕ್ಕಳಬಳ್ಳಿಯನ್ನು ತೊಲಗಿಸಿಬಿಡಬೇಕೇ ಹೊರತು ಇನ್ನಾವ ವಿಧದಲ್ಲಿಯೂ ಉಪಯೋಗಿಸಬಾರದೆಂದು ಡಾಕ್ಟರರಿಗೆ ಕೇವಲ ನಿರ್ದೇಶನ ಕೊಡುವುದು ಯೋಗ್ಯವಾಗಿರುವುದು.
ವಿವಿಧ ವೈದ್ಯಕೀಯ ಉತ್ಪನ್ನಗಳನ್ನು ಪ್ರಾಣಿಗಳಿಂದ ಅಥವಾ ಮಾನವರಿಂದ, ಹೀಗೆ ಜೀವವೈಜ್ಞಾನಿಕ ಮೂಲಗಳಿಂದ ಪಡೆದುಕೊಳ್ಳಲಾಗಿದೆ. ಉದಾಹರಣೆಗೆ, ಗರ್ಭಿಣಿ ಕುದುರೆಗಳ ಮೂತ್ರದಿಂದ ಕೆಲವು ಚೋದಕಸ್ರಾವ (ಹಾರ್ಮೋನ್)ಗಳು ತೆಗೆಯಲ್ಪಟ್ಟಿವೆ. ಕುದುರೆ ರಕ್ತವು ಧನುರ್ವಾಯು ದುಗ್ಧರಸ (ಟೆಟನಸ್ ಸೀರಮ್)ನ ಮೂಲವಾಗಿದೆ ಮತ್ತು ರೋಗದೊಂದಿಗೆ ಹೋರಾಡುವ ಗ್ಯಾಮ ಗ್ಲಾಬ್ಯುಲಿನ್ (ರಕ್ತ ಸಸಾರಜನಕ)ಅನ್ನು ದೀರ್ಘಕಾಲದಿಂದ ಮಾನವ ಗರ್ಭವೇಷ್ಟನ (ಜನನದ ಬಳಿಕ)ದಿಂದ ಪಡೆಯಲಾಗುತ್ತದೆ. ಕೆಲವು ಆಸ್ಪತ್ರೆಗಳಿಂದ ಗರ್ಭವೇಷ್ಟನಗಳು ಉಳಿಸಲ್ಪಟ್ಟಿದ್ದು, ಘನೀಭವಿಸಲ್ಪಟ್ಟು, ತದನಂತರ ಔಷಧ ತಯಾರಿಕೆಯ ಪ್ರಯೋಗಶಾಲೆಗಳಲ್ಲಿ ಸಂಗ್ರಹಿಸಲ್ಪಟ್ಟಿವೆ. ಇದರಿಂದಾಗಿ ಪ್ರತಿವಿಷವು ಸಮೃದ್ಧವಾಗಿದ್ದ ರಕ್ತವನ್ನು, ಗ್ಯಾಮ ಗ್ಲಾಬ್ಯುಲಿನನ್ನು ಪಡೆಯಲಿಕ್ಕಾಗಿ ಸಂಸ್ಕರಿಸಸಾಧ್ಯವಿತ್ತು.
ಹೆಚ್ಚು ಇತ್ತೀಚೆಗೆ, ಒಂದು ವಿಧದ ಲುಕೇಮಿಯ (ರಕ್ತಕ್ಷಯ)ದ ಚಿಕಿತ್ಸೆಗೆ ಜನನಾನಂತರದ ವಸ್ತುಗಳಿಂದ ತೆಗೆದ ರಕ್ತವನ್ನು ಉಪಯೋಗಿಸಿ ತಾವು ಯಶಸ್ಸನ್ನು ಪಡೆದಿದ್ದೇವೆಂದು ಸಂಶೋಧಕರು ವಾದಿಸಿದ್ದಾರೆ. ಮತ್ತು ಇಂತಹ ರಕ್ತವು ಕೆಲವು ಸೋಂಕುರಕ್ಷಾ ವ್ಯವಸ್ಥೆಯ ರೋಗಗಳಲ್ಲಿ ಅಥವಾ ಅಸ್ಥಿಮಜ್ಜೆಯ ಸ್ಥಳಾಂತರಗಳ ಬದಲಿಗೆ ಉಪಯುಕ್ತವಾದೀತೆಂದು ಊಹಿಸಲಾಗಿದೆ. ಹೀಗೆ, ಹೆತ್ತವರು ಜನನಾನಂತರದ ವಸ್ತುಗಳಿಂದ ರಕ್ತವನ್ನು ಪಡೆದು, ಘನೀಭವಿಸಿ, ತಮ್ಮ ಮಗುವಿಗೆ ಮುಂದಣ ವರ್ಷಗಳಲ್ಲಿ ಚಿಕಿತ್ಸೆಗೆ ಉಪಯುಕ್ತವಾಗಬಹುದೆಂದು ಸಂಗ್ರಹಿಸಿಡುತ್ತಾರೆಂಬುದಕ್ಕೆ ಸ್ವಲ್ಪಮಟ್ಟಿಗೆ ಪ್ರಚಾರ ದೊರಕಿದೆ.
ಗರ್ಭವೇಷ್ಟನ ರಕ್ತದ ಇಂತಹ ವ್ಯಾಪಾರೀಕರಣವು, ತಮ್ಮ ಯೋಚನೆಗಳನ್ನು ದೇವರ ಪರಿಪೂರ್ಣ ನಿಯಮದಿಂದ ಮಾರ್ಗದರ್ಶಿಸುವ ನಿಜ ಕ್ರೈಸ್ತರಿಗೆ ಹಿಡಿಸುವುದಿಲ್ಲ. ನಮ್ಮ ಸೃಷ್ಟಿಕರ್ತನು ರಕ್ತವನ್ನು, ಪವಿತ್ರವಾಗಿ, ದೇವದತ್ತ ಜೀವವನ್ನು ಪ್ರತಿನಿಧೀಕರಿಸುವಂತಹದ್ದಾಗಿ ಕಾಣುತ್ತಾನೆ. ಆತನು ಆಜ್ಞಾಪಿಸಿದ್ದಂತಹ ರಕ್ತದ ಒಂದೇ ಉಪಯೋಗವು, ಯಜ್ಞವೇದಿಯ ಮೇಲೆ, ಯಜ್ಞಗಳ ಸಂಬಂಧದಲ್ಲಿ ಮಾತ್ರವೇ ಆಗಿತ್ತು. (ಯಾಜಕಕಾಂಡ 17:10-12; ಹೋಲಿಸಿ ರೋಮಾಪುರ 3:25; 5:8; ಎಫೆಸ 1:7.) ಇಲ್ಲದಿರುವಲ್ಲಿ, ಒಂದು ಪ್ರಾಣಿಯಿಂದ ತೆಗೆದ ರಕ್ತವನ್ನು ನೆಲದ ಮೇಲೆ ಹೊಯ್ದುಬಿಟ್ಟು ತೊಲಗಿಸಿಬಿಡಬೇಕಾಗಿತ್ತು.—ಯಾಜಕಕಾಂಡ 17:13; ಧರ್ಮೋಪದೇಶಕಾಂಡ 12:15, 16.
ಕ್ರೈಸ್ತರು ಒಂದು ಪ್ರಾಣಿಯನ್ನು ಬೇಟೆಯಾಡುವಾಗ ಅಥವಾ ಒಂದು ಕೋಳಿ ಅಥವಾ ಆಡನ್ನು ಕೊಲ್ಲುವಾಗ, ಅವರು ರಕ್ತವನ್ನು ಹೊರಕ್ಕೆ ಹರಿಸಿ, ತೊಲಗಿಸಿಬಿಡುತ್ತಾರೆ. ಅವರು ಪದಶಃ ಅದನ್ನು ನೆಲದ ಮೇಲೆ ಹೊಯ್ಯಬೇಕಾಗಿರುವುದಿಲ್ಲ. ಯಾವುದೇ ಉಪಯೋಗಕ್ಕೆ ಹಾಕುವ ಬದಲಿಗೆ ಅದನ್ನು ತೊಲಗಿಸಿಬಿಡಬೇಕೆಂಬುದೇ ಮುಖ್ಯಾಂಶವಾಗಿದೆ.
ತಮ್ಮಿಂದ ತೆಗೆಯಲ್ಪಡುವ ಜೀವವೈಜ್ಞಾನಿಕ ಉತ್ಪನ್ನಗಳು, ಅವು ದೇಹದ ವಿಸರ್ಜನೆಗಳೇ ಆಗಲಿ, ರೋಗಸ್ಥ ಅಂಗಾಂಶಗಳೇ ಆಗಲಿ, ಅಥವಾ ರಕ್ತವೇ ಆಗಲಿ, ತೊಲಗಿಸಲ್ಪಡುವುವೆಂದು ಆಸ್ಪತ್ರೀಕರಿಸಲ್ಪಡುವ ಕ್ರೈಸ್ತರು ತಿಳಿದಿದ್ದಾರೆ. ಪ್ರಥಮವಾಗಿ, ಮೂತ್ರ ವಿಶ್ಲೇಷಣೆ, ಬಾವು ಗೆಡ್ಡೆ (ಟ್ಯೂಮರಸ್ ಟಿಶ್ಯೂ)ಯ ರೋಗಲಕ್ಷಣ ಪರೀಕ್ಷೆ, ಅಥವಾ ರಕ್ತ ಪರೀಕ್ಷೆಗಳಂತಹ ಕೆಲವು ಪರೀಕ್ಷೆಗಳನ್ನು ವೈದ್ಯರು ಮಾಡಬಯಸಿಯಾರೆಂಬುದು ಒಪ್ಪಿಕೊಳ್ಳತಕ್ಕ ವಿಷಯ. ಆದರೆ ಆ ಬಳಿಕ, ಸ್ಥಳಿಕ ನಿಯಮಾನುಸಾರ, ಆ ಉತ್ಪನ್ನಗಳನ್ನು ತೊಲಗಿಸಿಬಿಡಲಾಗುತ್ತದೆ. ಈ ಸಂಬಂಧದಲ್ಲಿ ಆಸ್ಪತ್ರೆಯ ರೋಗಿಯು ವಿಶೇಷ ಬಿನ್ನಹಗಳನ್ನು ಮಾಡಬೇಕೆಂದಿರುವುದಿಲ್ಲ. ಏಕೆಂದರೆ ಅಂತಹ ಜೀವವೈಜ್ಞಾನಿಕ ಉತ್ಪನ್ನಗಳನ್ನು ತೊಲಗಿಸಿಬಿಡುವುದು ನ್ಯಾಯಸಮ್ಮತವೂ ವೈದ್ಯಕೀಯವಾಗಿ ವಿವೇಕಯುತವಾದದ್ದೂ ಆಗಿದೆ. ಅಂತಹ ಸಾಮಾನ್ಯ ಪದ್ಧತಿಯನ್ನು ಅನುಸರಿಸಲಾಗುತ್ತದೆ ಎಂದು ಸಂಶಯಿಸಲು ಒಬ್ಬ ರೋಗಿಗೆ ಸಮಂಜಸವಾದ ಕಾರಣವಿದ್ದಲ್ಲಿ, ಅವನು ಅಥವಾ ಅವಳು ಅದನ್ನು ಒಳಗೊಂಡಿರುವ ವೈದ್ಯರಿಗೆ, ಧಾರ್ಮಿಕ ಕಾರಣಗಳಿಗಾಗಿ ಅಂತಹ ಎಲ್ಲ ಉತ್ಪನ್ನಗಳನ್ನು ತೊಲಗಿಸುವುದನ್ನು ತಾವು ಬಯಸುತ್ತೇವೆಂದು ಹೇಳಸಾಧ್ಯವಿದೆ.
ಆದರೆ, ಈ ಮುಂಚೆ ಹೇಳಿರುವಂತೆ ಇದು ಸಾಮಾನ್ಯ ರೋಗಿಗೆ ಚಿಂತೆಯ ವಿಷಯವಾಗಿರುವುದು ವಿರಳ, ಏಕೆಂದರೆ ಅನೇಕ ಸ್ಥಳಗಳಲ್ಲಿ, ಜನನಾನಂತರದ ವಸ್ತುಗಳ ಅಥವಾ ಜೀವವೈಜ್ಞಾನಿಕ ಉತ್ಪನ್ನಗಳ ಕಾಪಾಡುವಿಕೆಯನ್ನು, ನಿಯತಕ್ರಮದಲ್ಲಿ ಮಾಡುವುದಂತೂ ಇರಲಿ, ಅದನ್ನು ಪರಿಗಣಿಸುವುದೂ ಇಲ್ಲ.
ಜನವರಿ 1, 1997ರ ಕಾವಲಿನಬುರುಜು ಪತ್ರಿಕೆಯಲ್ಲಿ ಕಂಡುಬರುವ, “ಕೆಟ್ಟದ್ದನ್ನು ನಾವು ಹೇಸೋಣ” ಎಂಬ ಲೇಖನವು, ಶಿಶುಕಾಮದ ಮೇಲೆ ಕೇಂದ್ರೀಕರಿಸುವಂತೆ ತೋರಿತು. ಈ ರೂಢಿಯ ಅರ್ಥವನ್ನು ಹೇಗೆ ನಿರೂಪಿಸಬೇಕು?
ವೆಬ್ಸ್ಟರ್ಸ್ ನೈನ್ತ್ ನ್ಯೂ ಕಲೀಜಿಯೆಟ್ ಡಿಕ್ಷನರಿಯು ಶಿಶುಕಾಮವನ್ನು, “ಯಾವುದರಲ್ಲಿ ಮಕ್ಕಳು ಹೆಚ್ಚು ಇಷ್ಟಕರವಾದ ಲೈಂಗಿಕ ಗುರಿಗಳಾಗಿರುತ್ತಾರೋ ಆ ವಿಕೃತ ಕಾಮ”ವೆಂದು ಅರ್ಥನಿರೂಪಿಸುತ್ತದೆ. ಈ ಆಚಾರದ ಲಕ್ಷಣಗಳನ್ನು ಧರ್ಮೋಪದೇಶಕಾಂಡ 23:17, 18 (NW) ಖಂಡಿಸುತ್ತದೆ. ಅಲ್ಲಿ ದೇವರು, ದೇವದಾಸ ವೇಶ್ಯಾವೃತ್ತಿ (“ಅಥವಾ, ‘ಗುದಮೈಥುನಿ,’ ವಿಕೃತ ಕಾಮೋದ್ದೇಶಕ್ಕಾಗಿರುವ ಹುಡುಗ,” ಪಾದಟಿಪ್ಪಣಿ)ಯ ವಿರುದ್ಧ ಮಾತಾಡಿದನು. “ಯೆಹೋವನ ಮಂದಿರ”ದೊಳಗೆ ಗುದಮೈಥುನ [“ನಾಯಿ,” NW] (“ಪ್ರಾಯಶಃ ಒಬ್ಬ ಹುಡುಗಕಾಮಿ; ವಿಶೇಷವಾಗಿ ಒಬ್ಬ ಹುಡುಗನೊಂದಿಗೆ ಗುದಮೈಥುನವನ್ನು ಮಾಡುವವನು,” ಪಾದಟಿಪ್ಪಣಿ)ದ ಹಣವನ್ನು ತರುವುದನ್ನು ಸಹ ಈ ವಚನಗಳು ನಿಷೇಧಿಸಿದವು. ಈ ಶಾಸ್ತ್ರೀಯ ಹಾಗೂ ಐಹಿಕ ಆಧಾರಗಳು, ಒಬ್ಬ ವಯಸ್ಕನು ಒಂದು ಮಗುವನ್ನು ಲೈಂಗಿಕ ದುರುಪಯೋಗದ—ಪ್ರೀತಿಸ್ಪರ್ಶ ಸೇರಿಸಿ—ಗುರಿಯಾಗಿ ಮಾಡುವುದರ ಕುರಿತಾಗಿ ಕಾವಲಿನಬುರುಜು ಚರ್ಚಿಸುತ್ತಿತ್ತೆಂಬುದನ್ನು ರುಜುಪಡಿಸುತ್ತವೆ.