ಒಂದು ಅರ್ಥರಹಿತ ಮತಾಚರಣೆಯೊ?
ಪಾಪ ನಿವೇದನೆಯ ಮತ ಸಂಸ್ಕಾರವು ಕ್ಯಾತೊಲಿಕರಿಂದ ಶತಮಾನಗಳಿಂದ ಆಚರಿಸಲ್ಪಡುತ್ತಿದೆ. ಆದರೂ ಅನೇಕರಿಗೆ ಅದೊಂದು ವ್ಯರ್ಥವಾದ ಮತಾಚರಣೆ. ತನ್ನ ಯೌವನವನ್ನು ನೆನಪಿಸಿಕೊಳ್ಳುತ್ತಾ, ಬಾಬ್ ಎಂಬ ಒಬ್ಬ ಹೈಸ್ಕೂಲ್ ಪ್ರಿನ್ಸಿಪಲ್ ಹೇಳುವುದು: “ನಾನು ಹದಿಹರೆಯದವನಾಗಿದ್ದೆ, ಆಗಲೂ ನಾನದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.” ಯಾಕೆ ತೆಗೆದುಕೊಳ್ಳಲಿಲ್ಲ? ಅವನಿಗೆ ಪಾಪ ನಿವೇದನೆಯು ಒಂದು ಅರ್ಥರಹಿತ ಮತಾಚರಣೆಯಾಗಿ ಪರಿಣಮಿಸಿತ್ತು. ಅವನು ವಿವರಿಸುವುದು: “ಪಾಪ ನಿವೇದನೆಯು, ನಿಮ್ಮೆಲ್ಲಾ ಪಾಪಗಳು ತುಂಬಿದ ಸಾಮಾನುಗಳನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ವ್ಯಕ್ತಿಯ ಬಳಿಗೆ ತರುವುದಕ್ಕೆ ಸಮಾನವಾಗಿತ್ತು. ನಿಮ್ಮ ಪಾಪಗಳ ಕುರಿತು ಅವನು ಪ್ರಶ್ನೆಗಳನ್ನು ಕೇಳುತ್ತಾನೆ ಮತ್ತು ಅನಂತರ, ನೀವು ವಿದೇಶದಲ್ಲಿರುವಾಗ ಖರೀದಿಸಿದ ಭೋಗ ವಸ್ತುಗಳಿಗಾಗಿ ಸುಂಕವನ್ನು ಕೊಟ್ಟ ಬಳಿಕ ಅವನು ನಿಮ್ಮನ್ನು ಹೋಗಗೊಡಿಸುತ್ತಾನೆ.”
ತದ್ರೀತಿಯಲ್ಲಿ, ಫ್ರ್ಯಾಂಕ್ ವೆಸ್ಲಿಂಗ್, ಯು.ಎಸ್. ಕ್ಯಾಥೊಲಿಕ್ ನಲ್ಲಿ ಬರೆಯುತ್ತಾ, ಪಾಪ ನಿವೇದನಾ ಪದ್ಧತಿಯನ್ನು, “ಸಾಮಾನ್ಯ ಪಾಪಗಳನ್ನು ಒಂದು ಕಂಠಪಾಠ ಮಾಡಿದ ಪಶ್ಚಾತ್ತಾಪದ ಪ್ರಾರ್ಥನಾ ಪದ್ಧತಿಯ ಮೂಲಕ ಅಳಿಸಿಬಿಡುವಿಕೆಯಿಂದ ಒಂದು ನಾಮಮಾತ್ರದ ದೇಹದಂಡನೆಯ ಸಂಸ್ಕಾರ ವಿಧಿಯ ತನಕ ಹರಡಿರುವ ಒಂದು ಅತ್ಯಂತ ಸುಲಭಕ್ರಮದ ಕೈಪಿಡಿ,” ಯಾಗಿ ವಿವರಿಸಿದ್ದಾನೆ. ವೆಸ್ಲಿಂಗ್ನ ತೀರ್ಮಾನ? “ಪಾಪ ನಿವೇದನೆಯು ಆತ್ಮಿಕ ಸುಕ್ಷೇಮಕ್ಕೆ ಒಳ್ಳೆಯದೆಂದು ನನಗೆ ಮಂದಟ್ಟಾಗಿದೆ. ಆದರೆ ಕ್ಯಾಥೊಲಿಕರು ಅದನ್ನು ಮಾಡುವ ವಿಧಾನವು ಒಂದು ಸಮಸ್ಯೆ,” ಎಂದನ್ನುತ್ತಾನೆ ಅವನು.
ಬೈಬಲು ಪಾಪ ನಿವೇದನೆಯನ್ನು ಒಂದು ಸಂಪೂರ್ಣ ಭಿನ್ನವಾದ ರೀತಿಯಲ್ಲಿ ನಿರೂಪಿಸುತ್ತದೆ. ದೇವರಿಗೆ ನಿವೇದನೆ ಮಾಡುವುದು ಅತ್ಯಂತ ಪ್ರಾಮುಖ್ಯವಾಗಿದೆ. (ಕೀರ್ತನೆ 32:1-5) ಮತ್ತು ಕ್ರೈಸ್ತ ಶಿಷ್ಯ ಯಾಕೋಬನು ಬರೆದದ್ದು: “ನಿಮ್ಮಲ್ಲಿ ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ; ಅವರು ಕರ್ತನ [“ಯೆಹೋವನ,” NW] ಹೆಸರಿನಿಂದ ಅವನಿಗೆ ಎಣ್ಣೆಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ. ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ ಒಬ್ಬರಿಗೋಸ್ಕರ ಒಬ್ಬರು ದೇವರನ್ನು ಪ್ರಾರ್ಥಿಸಿರಿ.”—ಯಾಕೋಬ 5:14, 16.
ಪಾಪದ ಹೊರೆಯುಳ್ಳ ಕ್ರೈಸ್ತನೊಬ್ಬನು ಸಭೆಯ ಹಿರಿಯರನ್ನು ಕರೆಯಬಲ್ಲನು, ಅವರು ತಪ್ಪಿತಸ್ಥನಿಗೆ ಅವನ ಪಾಪದ ಮಾರ್ಗವನ್ನು ಬಿಟ್ಟುಬಿಡುವಂತೆ ಸಹಾಯಕ್ಕಾಗಿ ಬೈಬಲಿನಿಂದ ವ್ಯಕ್ತಿಪರ ಮತ್ತು ಪ್ರಾಯೋಗಿಕ ಸಲಹೆಯನ್ನು ಕೊಡಬಲ್ಲರು. ಆತ್ಮಿಕವಾಗಿ ಅಸ್ವಸ್ಥನಾಗಿರುವವನ ಪ್ರಗತಿಯನ್ನು ನೋಡಿಕೊಳ್ಳುತ್ತಾ, ತಕ್ಕದಾದ್ದ ಪ್ರೋತ್ಸಾಹನೆಯನ್ನು ಮೇಲ್ವಿಚಾರಕರು ನೀಡಬಲ್ಲರು. ಇದು ಚರ್ಚುಗಳಿಂದ ಇಂದು ಆಚರಿಸಲ್ಪಡುವ ಪಾಪ ನಿವೇದನೆಯ ಸಂಸ್ಕಾರಕ್ಕೆ ಎಂತಹ ವೈದೃಶ್ಯದಲ್ಲಿದೆ! ಸಭಾ ಹಿರಿಯರ ವ್ಯಕ್ತಿಪರ ಸಹಾಯದಿಂದ ಬಲಪಡಿಸಲ್ಪಟ್ಟು, ತಾನು ಅನುಭವಿಸಿದ ಉಪಶಮನವನ್ನು ಒಂದು ಕೀರ್ತನೆಯಲ್ಲಿ ದಾವೀದನು ವ್ಯಕ್ತಪಡಿಸಿದ ಪ್ರಕಾರ, ಪಶ್ಚಾತ್ತಾಪಪಡುವ ತಪ್ಪಿತಸ್ಥರು ಪಡೆದುಕೊಳ್ಳಶಕ್ತರು: “ಯೆಹೋವನ ಸನ್ನಿಧಿಯಲ್ಲಿ ನನ್ನ ದ್ರೋಹವನ್ನು ಒಪ್ಪಿಕೊಳ್ಳುವೆನು ಅಂದುಕೊಂಡು ನನ್ನ ಪಾಪವನ್ನು ಮರೆಮಾಡದೆ ನಿನಗೆ ನನ್ನ ದೋಷವನ್ನು ತಿಳಿಸಿದೆನು. ನೀನು ನನ್ನ ಅಪರಾಧಪಾಪಗಳನ್ನು ಪರಿಹರಿಸಿಬಿಟ್ಟಿ.”—ಕೀರ್ತನೆ 32:5.