ಒಬ್ಬ ನಿಜ ಸೌವಾರ್ತಿಕನ ಕೊಯ್ಲು
ವಿಲ್ಯಮ್ ಆರ್. ಬ್ರೌನ್ 1923 ರಲ್ಲಿ ಮೊದಲು ಆಫ್ರಿಕಕ್ಕೆ ಹೋದರು. ಅವರ ಮಡದಿ ಮತ್ತು ಮಗುವಿನೊಂದಿಗೆ ಅವರು ಗ್ಯಾಂಬಿಯ, ಘಾನ, ಲೈಬಿರೀಯ, ನೈಜಿರೀಯ, ಮತ್ತು ಸೀಯೆರ ಲೀಯೋನ್ ದೇಶಗಳಲ್ಲಿ ‘ಸೌವಾರ್ತಿಕನ ಕೆಲಸವನ್ನು ಮಾಡಿದರು.’ (2 ತಿಮೊಥೆಯ 4:5) ಅವರ ಕೆಲಸದ ಫಲ ಅಸಾಧಾರಣವಾಗಿದೆ.
ವೆಸ್ಟ್ ಇಂಡೀಸ್ ನಾಡಿಗರಾದ ಇವರು ಕ್ರೈಸ್ತಪ್ರಪಂಚದ ಚರ್ಚುಗಳಲ್ಲಿ ಒಂದರ ಸದಸ್ಯರಾಗಿರಲಿಲ್ಲ, ಮತ್ತು ಅವರು ಖಂಡಿತವಾಗಿಯೂ ರಾಜಕೀಯದಲ್ಲಿ ಸಿಕ್ಕಿಕೊಳ್ಳಲಿಲ್ಲ. ಅವರು ಯೆಹೋವನ ನಾಮ ಮತ್ತು ಪರಮಾಧಿಕಾರವನ್ನು ಪ್ರಚಾರ ಮಾಡುವ ಮೂಲಕ ಯೇಸು ಮತ್ತು ಅಪೊಸ್ತಲರನ್ನು ಅನುಕರಿಸಿ, ಪ್ರಾಯಶ್ಚಿತದ್ತ ಪ್ರಾಮುಖ್ಯತೆ, ಮತ್ತು ರಾಜ್ಯದ ಸುವಾರ್ತೆಯ ಸಾರುವಿಕೆಗೆ ಮಹತ್ವ ಕೊಟ್ಟರು. (ಮತ್ತಾಯ 9:35; 20:28; ಯೋಹಾನ 17:4-6) ವಿಲ್ಯಮ್ ಆರ್. ಬ್ರೌನ್ ಸದಾ ಬೈಬಲನ್ನು ಉಪಯೋಗಿಸಿ, ತಾತ್ವಿಕ ಮತ್ತು ನಂಬಿಕೆಯ ವಿಚಾರಗಳಲ್ಲಿ ಅದೇ ಅಂತಿಮ ಪ್ರಮಾಣ ಗ್ರಂಥವೆಂದು ತೋರಿಸಿದರು. (2 ತಿಮೊಥೆಯ 3:16) ಇದರ ಸಂಬಂಧದಲ್ಲಿ ಅವರು ಎಷ್ಟು ಪಟ್ಟು ಹಿಡಿಯುತ್ತಿದ್ದರೆಂದರೆ ಅವರಿಗೆ ಬೈಬಲ್ ಬ್ರೌನ್ ಎಂದು ಹೆಸರಾಯಿತು.
ಯೆಹೋವನ ಆಶೀರ್ವಾದದಿಂದ, ಬೈಬಲ್ ಬ್ರೌನ್ ಬಿತ್ತಿದ ಬೀಜಗಳು ಮೊಳೆತು ಬೆಳೆದವು. ಇಂದು, ಅವರು ಮೊದಲ ಹೆಜ್ಜೆಯನ್ನಿಟ್ಟ ದೇಶಗಳಲ್ಲಿ, ಸುಮಾರು 2,00,000 ಆಫ್ರಿಕನರು ಸೃಷ್ಟಿಕರ್ತನಿಗೆ ತಮ್ಮ ಜೀವನಗಳನ್ನು ಸಮರ್ಪಿಸಿಕೊಂಡು, ಸರದಿಯಾಗಿ, ಇತರರಿಗೆ ರಾಜ್ಯದ ಸುವಾರ್ತೆಯನ್ನು ಸಾರುತ್ತಾರೆ. (ಮತ್ತಾಯ 24:14; 1 ಕೊರಿಂಥ 3:6-9) ಈ ಕಾರ್ಯಶೀಲ ಕ್ರೈಸ್ತರು ಅವರ ಪ್ರಾಮಾಣಿಕತೆ ಮತ್ತು ಭರವಸಾರ್ಹತೆಗೆ ವ್ಯಾಪಕವಾಗಿ ಹೆಸರು ಪಡೆದಿದ್ದಾರೆ. ಅವರು ಯೆಹೋವನ ಸಾಕ್ಷಿಗಳಾಗಲು ಮತ್ತು ಆಳುವ ಅರಸನಾದ ಕ್ರಿಸ್ತನ ಪ್ರಜೆಗಳಾಗಲು ಅಭಿಮಾನಪಡುತ್ತಾರೆ.
ಇಂಥ ಕೊಯ್ಲು ನಿಜ ಕ್ರೈಸ್ತ ಸೌವಾರ್ತಿಕತನದ ಫಲಿತಾಂಶವಾಗಿದೆ. ಇಂಥ ಕೊಯ್ಲು ಪ್ರತಿಯೊಂದು ನಿವಾಸಿತ ಭೂಖಂಡದಲ್ಲಿಯೂ ಲೋಕವ್ಯಾಪಕವಾಗಿ ಕೊಯ್ಯಲ್ಪಡುತ್ತಿದೆ. ಇನ್ನೂರಕ್ಕೂ ಹೆಚ್ಚು ದೇಶಗಳಲ್ಲಿ, 40 ಲಕ್ಷಕ್ಕೂ ಹೆಚ್ಚು ದೀನಹೃದಯಿಗಳಾದ ಸ್ತ್ರೀಪುರುಷರನ್ನು “ಕೊಯ್ಯಲಾಗಿದ್ದು” ಅವರು ಇತರರಿಗೆ, “ನೀವೆಲ್ಲರು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪು ಮಾಡುವ ಗಳಿಗೆಯು ಬಂದಿದೆ” ಎಂಬ ಸೌವಾರ್ತಿಕ ದೇವದೂತನ ಮಾತುಗಳನ್ನು ಪುನರುಚ್ಚರಿಸುತ್ತಿದ್ದಾರೆ. (ಪ್ರಕಟನೆ 14:7) ಸತ್ಯವಾಗಿ, ನಮ್ಮ ಕ್ಲೇಶಮಯ ಯುಗದಲ್ಲಿ, ನಿರೀಕ್ಷೆಯನ್ನು ಕಂಡುಕೊಳ್ಳುವ ಒಂದೇ ಮಾರ್ಗವು ದೇವರ ಕಡೆಗೆ ತಿರುಗಿ ಆತನ ರಾಜ್ಯದ ಆಳಿಕೆಗೆ ಅಧೀನರಾಗುವುದೇ. (w92 9/1)